ಚಂಡೀಗಢ: ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಮತ್ತು ರಾಜ್ಯಸಭಾ ಸಂಸದ ಹರ್ಭಜನ್ ಸಿಂಗ್ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ಪಂಜಾಬ್ ಸರ್ಕಾರ ಸಂಪೂರ್ಣವಾಗಿ ಹಿಂಪಡೆದಿದೆ ಎಂದು ವರದಿಯಾಗಿದೆ.
ಹರ್ಭಜನ್ ಸಿಂಗ್ಗೆ ಪಂಜಾಬ್ ಸರ್ಕಾರದಿಂದ ಭದ್ರತೆಯನ್ನು ನೀಡಲಾಗಿತ್ತು.
ಜಲಂಧರ್ನಲ್ಲಿರುವ ಅವರ ನಿವಾಸದ ಹೊರಗೆ ನಿಯೋಜಿಸಲಾಗಿದ್ದ ಎಲ್ಲಾ ಭದ್ರತಾ ಸಿಬ್ಬಂದಿಯನ್ನು ಈಗ ಸರ್ಕಾರದ ಆದೇಶದ ಮೇರೆಗೆ ವಾಪಸ್ ಕರೆಸಿಕೊಳ್ಳಲಾಗಿದೆ.
ಇತ್ತೀಚೆಗೆ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರು ಆಪ್ ತೊರೆದು ಬಿಜೆಪಿ ಸೇರುವುದಾಗಿ ಘೋಷಿಸಿದ್ದರು. ತಮ್ಮೊಂದಿಗೆ ಹರ್ಭಜನ್ ಸಿಂಗ್ ಸೇರಿದಂತೆ ಆಪ್ನ ಒಟ್ಟು 7 ಮಂದಿ ರಾಜ್ಯಸಭಾ ಸಂಸದರು ಬಿಜೆಪಿ ಸೇರುತ್ತಿದ್ದಾರೆ ಎಂದು ತಿಳಿಸಿದ್ದರು. ಈ ರಾಜಕೀಯ ಬೆಳವಣಿಗೆಯ ನಡುವೆ ಭಗವಂತ್ ಮಾನ್ ನೇತೃತ್ವದ ಆಪ್ ಸರ್ಕಾರ, ಹರ್ಭಜನ್ ಸಿಂಗ್ ಅವರ ಭದ್ರತೆಯನ್ನು ಕಡಿತಗೊಳಿಸಿದೆ ಎನ್ನಲಾಗಿದೆ.
7 ಮಂದಿ ರಾಜ್ಯಸಭಾ ಸಂಸದರು ಬಿಜೆಪಿಗೆ ಸೇರ್ಪಡೆಗೊಂಡ ಬೆನ್ನಲ್ಲೇ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಏಳು ನಾಯಕರನ್ನು 'ಗದ್ದಾರ್ಗಳು' (ದೇಶದ್ರೋಹಿ) ಎಂದು ಕರೆದರು. 'ಬಿಜೆಪಿ ಪಕ್ಷವು ಎಎಪಿಯನ್ನು ಒಡೆಯಲು ಪ್ರಯತ್ನಿಸುತ್ತಿದೆ ಮತ್ತು ಪಂಜಾಬ್ ಜನರಿಗೆ ದ್ರೋಹ ಮಾಡಿದೆ' ಎಂದು ಆರೋಪಿಸಿದರು.

