ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಹಡ್ಸನ್ ಇನ್ಸ್ಟಿಟ್ಯೂಟ್ ಸಮ್ಮೇಳನದಲ್ಲಿ ಮಾತನಾಡಿದ ಮಾಧವ್, 'ಭಾರತವು ಇರಾನ್ನಿಂದ ತೈಲ ಖರೀದಿಯನ್ನು ನಿಲ್ಲಿಸಲು ಒಪ್ಪಿಕೊಂಡಿತು. ಪ್ರತಿಪಕ್ಷಗಳು ತೀವ್ರವಾಗಿ ಟೀಕಿಸಿದ್ದರೂ ರಶ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಲು ನಾವು ಒಪ್ಪಿಕೊಂಡೆವು. ಭಾರತವು ಹೆಚ್ಚು ಮಾತನಾಡದೆ ಶೇ.50ರಷ್ಟು ಸುಂಕವನ್ನೂ ಒಪ್ಪಿಕೊಂಡಿತು. ಆದರೂ ಭಾರತವು ಅಮೆರಿಕದೊಂದಿಗೆ ಸಾಕಷ್ಟು ಸಹಕರಿಸುತ್ತಿಲ್ಲ ಎನ್ನಲಾಗುತ್ತಿದೆ, ಏಕೆ ಎಂದು ಪ್ರಶ್ನಿಸಿದ್ದರು.
ಮಾಧವ್ ಅವರು ಮಾಜಿ ರಾಜತಾಂತ್ರಿಕ ಎಲಿಝಬೆಥ್ ಥ್ರೆಕ್ಲೆಡ್ ಮತ್ತು ಅಮೆರಿಕದ ಮಾಜಿ ವಿದೇಶಾಂಗ ಉಪಸಚಿವ ಕರ್ಟ್ ಕ್ಯಾಂಪ್ಬೆಲ್ ಅವರೂ ಇದ್ದ ಪ್ಯಾನೆಲ್ನ ಭಾಗವಾಗಿದ್ದರು. ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಭಾರತವು ರಶ್ಯಾದಿಂದ ತೈಲ ಖರೀದಿಸುತ್ತಿದ್ದನ್ನು ಟೀಕಿಸಿದ್ದ ಟ್ರಂಪ್, ಇದಕ್ಕಾಗಿ ಭಾರತದ ಮೇಲಿನ ಆಮದು ಸುಂಕವನ್ನು ದ್ವಿಗುಣಗೊಳಿಸಿದ್ದರು.
ಮಾಧವ್ ಅವರ ಹೇಳಿಕೆಗಳು ಸರಕಾರದ ವಿದೇಶಾಂಗ ನೀತಿಯನ್ನು ಟೀಕಿಸಲು ಕಾಂಗ್ರೆಸ್ಗೆ ಅಸ್ತ್ರವನ್ನು ಒದಗಿಸಿವೆ. ಮೋದಿ ಸರಕಾರವು ಟ್ರಂಪ್ ಎದುರು ಶರಣಾಗಿದೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಬದಿಗೊತ್ತಿದೆ ಎಂದು ಅದು ಕಿಡಿಕಾರಿದೆ.
ವಿರೋಧ ಪಕ್ಷಗಳು ತನ್ನ ಹೇಳಿಕೆಯ ಬಗ್ಗೆ ಗದ್ದಲವೆಬ್ಬಿಸಿದ ಬಳಿಕ ಮಾಧವ ಎಕ್ಸ್ನಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ. 'ನಾನು ಹೇಳಿದ್ದು ತಪ್ಪು. ಭಾರತವು ಯಾವುದೇ ಸಂದರ್ಭದಲ್ಲಿಯೂ ರಷ್ಯಾದಿಂದ ತೈಲ ಆಮದನ್ನು ನಿಲ್ಲಿಸಲು ಒಪ್ಪಿಕೊಂಡಿರಲಿಲ್ಲ. ಅಲ್ಲದೆ ಶೇ.50ರಷ್ಟು ಸುಂಕ ವಿಧಿಸುವುದನ್ನೂ ಅದು ತೀವ್ರವಾಗಿ ಪ್ರತಿಭಟಿಸಿತ್ತು. ನಾನು ಇತರ ಪ್ಯಾನೆಲಿಸ್ಟ್ಗಳ ಮುಂದೆ ಸೀಮಿತ ಪ್ರತಿವಾದವನ್ನು ಮಂಡಿಸಲು ಯತ್ನಿಸಿದ್ದೆ, ಆದರೆ ನನ್ನ ಹೇಳಿಕೆಯು ವಾಸ್ತವಿಕವಾಗಿ ತಪ್ಪಾಗಿತ್ತು. ಅದಕ್ಕಾಗಿ ಕ್ಷಮೆ ಯಾಚಿಸುತ್ತೇನೆ' ಎಂದು ಅವರು ಹೇಳಿದ್ದಾರೆ.
ನರೇಂದ್ರ ಮೋದಿಯವರು ಪ್ರಧಾನಿಯಾಗಿ ಮುಂದುವರಿಯುವ ಅಧಿಕಾರವನ್ನು ಕಳೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಮೋದಿಯವರು ಅಮೆರಿಕದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಹಿರಿಯ ಆರೆಸ್ಸೆಸ್ ನಾಯಕ ಸ್ಪಷ್ಟವಾಗಿ ಒಪ್ಪಿಕೊಂಡಿದ್ದಾರೆ. ಒಂದು ಕಾಲದಲ್ಲಿ ಭಾರತದ ವಿರುದ್ಧ ಪಾಕ್ಗೆ ನೆರವಾಗಲು ಅಮೆರಿಕದ ಏಳನೇ ನೌಕಾಪಡೆ ಬಂಗಾಳ ಕೊಲ್ಲಿಯಲ್ಲಿತ್ತು ಮತ್ತು ಭಾರತವು ಮಣಿದಿರಲಿಲ್ಲ,ಆದರೆ ಇಂದು ದೇಶದ ಹಿತಾಸಕ್ತಿಗಳೊಂದಿಗೆ ರಾಜಿ ಮಾಡಿಕೊಂಡಿರುವ ಪ್ರಧಾನಿ ಭಾರತದ ಸಾರ್ವಭೌಮತ್ವವನ್ನು ಅಮೆರಿಕಕ್ಕೆ ಹಸ್ತಾಂತರಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಎಕ್ಸ್ನಲ್ಲಿ ಕುಟುಕಿದ್ದಾರೆ. ಮಾಧವ ಅವರ ವೀಡಿಯೊವನ್ನೂ ಅವರು ಹಂಚಿಕೊಂಡಿದ್ದಾರೆ.

