ತಿರುವನಂತಪುರಂ: ಪ್ರವಾಸಕ್ಕೆಂದು ಬೆಂಗಳೂರಿಗೆ ಬಂದಿದ್ದ ಕೇರಳ ಮೂಲದ ಮಹಿಳೆಯರಿಬ್ಬರು ದುರಂತ ಅಂತ್ಯ ಕಂಡಿದ್ದಾರೆ. ಬುಧವಾರ (ಏ.29) ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿತದಲ್ಲಿ ಎರ್ನಾಕುಲಂ ಜಿಲ್ಲೆಯ ರಾಮಮಂಗಲಂ ನಿವಾಸಿಗಳಾದ ಸ್ಮಿತಾ ರಘು (47) ಮತ್ತು ಕೆ.ಕೆ. ಲತಾ (57) ಮೃತ ಪಟ್ಟಿದ್ದಾರೆ.
ಮೃತರಾದ ಸ್ಮಿತಾ ರಘು ಮತ್ತು ಲತಾ ಅವರು ಸತತ ಎರಡು ದಶಕಗಳಿಂದ ಮಹಿಳಾ ಸಬಲೀಕರಣದ 'ಕುಟುಂಬಶ್ರೀ' ಮಿಷನ್ನ ಸಕ್ರಿಯ ಸದಸ್ಯರಾಗಿದ್ದರು. ಈ ಇಬ್ಬರ ಅನಿರೀಕ್ಷಿತ ಸಾವು ರಾಮಮಂಗಲಂ ಸ್ಥಳೀಯರಲ್ಲಿ ಆಘಾತವನ್ನು ಉಂಟುಮಾಡುತ್ತದೆ.
'ಕಳೆದ ಎರಡು ದಶಕಗಳಿಂದ ಕುಟುಂಬಶ್ರೀ ಚಟುವಟಿಕೆಗಳಲ್ಲಿ ಇವರು ಸಕ್ರಿಯರಾಗಿದ್ದರು. ತಮ್ಮ ಘಟಕದ ಆರು ಮಂದಿ ಸದಸ್ಯರೊಂದಿಗೆ ಪ್ರವಾಸಕ್ಕೆಂದು ಬೆಂಗಳೂರಿಗೆ ಹೋಗಿದ್ದರು. ಮೃತಪಟ್ಟ ಇಬ್ಬರಿಗೂ ವಿಮಾನದಲ್ಲಿ ಪ್ರಯಾಣಿಸಬೇಕು ಎಂಬುದು ಬಹುಕಾಲದ ಕನಸಾಗಿತ್ತು. ಇದಕ್ಕಾಗಿ ದುಡಿಮೆಯ ಹಣವನ್ನು ಉಳಿಸಿ ಈ ಪ್ರವಾಸವನ್ನು ಕೈಗೊಂಡಿದ್ದರು' ಎಂದು ಕುಟುಂಬಶ್ರೀ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಇಬ್ಬರೂ ಮಹಿಳೆಯರು ಅಂಗನವಾಡಿಗಳಿಗೆ ಸರಬರಾಜು ಮಾಡುವ 'ಅಮೃತಂ ನ್ಯೂಟ್ರಿಮಿಕ್ಸ್' ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರು.
ಮನೆಗೆ ಆಧಾರ ಸ್ತಂಭವಾಗಿದ್ದ ಸ್ಮಿತಾ ರಘು
ಮೃತ ಸ್ಮಿತಾ ರಘು ಅವರು ವಯೋವೃದ್ಧ ಪೋಷಕರು ಸೇರಿದಂತೆ ಏಳು ಸದಸ್ಯರಿದ್ದ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದರು. ಅವರ ಪತಿ ಅನಾರೋಗ್ಯದ ಕಾರಣ ಕೆಲಸ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ.. ಸ್ಮಿತಾ ಅವರಿಗೆ ಮೂವರು ಮಕ್ಕಳಿದ್ದು, ಇಡೀ ಕುಟುಂಬದ ಜವಾಬ್ದಾರಿ ಅವರ ಹೆಗಲ ಮೇಲಿತ್ತು. ಆದರೆ ಅವರ ಸಾವು ಇಡೀ ಕುಟುಂಬವನ್ನು ಸಂಕಷ್ಟಕ್ಕೆ ದೂಡಿದೆ.
ಇನ್ನು, ಅವಿವಾಹಿತೆಯಾಗಿದ್ದ ಕೆ.ಕೆ. ಲತಾ ಅವರು ತಾಯಿ ಮತ್ತು ಸಹೋದರರೊಂದಿಗೆ ವಾಸವಿದ್ದರು.
ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ರಾಮಮಂಗಲಂ ಪಂಚಾಯಿತಿ ಸಭಾಂಗಣದಲ್ಲಿ ಇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

