ಜೈಪುರ: ಪೋಷಕರು ಹಾಗೂ ಸಾಮಾಜಿಕ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾದ ಬಳಿಕ ಶಾಲಾ ವಿದ್ಯಾರ್ಥಿಗಳಿಗೆ ''ಹೆಚ್ಚು ಅರ್ಥಪೂರ್ಣ'' ಹೆಸರುಗಳನ್ನು ನೀಡುವ ಅಭಿಯಾನವನ್ನು ರಾಜಸ್ಥಾನ ಸರಕಾರ ಶುಕ್ರವಾರ ಹಿಂದೆಗೆದುಕೊಂಡಿದೆ.
''ಸಾರ್ಥಕ್ ನಾಮ್ ಅಭಿಯಾನ್'' ಎಂಬ ಶೀರ್ಷಿಕೆಯ ಈ ಅಭಿಯಾನವನ್ನು ರಾಜ್ಯ ಶಿಕ್ಷಣ ಇಲಾಖೆ ಎಪ್ರಿಲ್ 13ರಂದು ಆರಂಭಿಸಿತ್ತು.
ಇದು ಮುಜುಗುರ ಅಥವಾ ಅವಹೇಳನಕಾರಿ ಅರ್ಥಗಳನ್ನು ಹೊಂದಿರುವ ಹೆಸರಿಗೆ ಬದಲಾಗಿ ವಿದ್ಯಾರ್ಥಿಗಳಿಗೆ ಅರ್ಥಪೂರ್ಣ ಹೆಸರುಗಳನ್ನು ಸೂಚಿಸುವ ಉದ್ದೇಶ ಹೊಂದಿತ್ತು.
ಇಂತಹ ಹೆಸರುಗಳು ವಿದ್ಯಾರ್ಥಿಗಳ ಸ್ವಾಭಿಮಾನಕ್ಕೆ ಧಕ್ಕೆ ಉಂಟು ಮಾಡಬಹುದು ಎಂದು ಶಿಕ್ಷಣ ಇಲಾಖೆ ತಿಳಿಸಿತ್ತು. ಅದು ವಿದ್ಯಾರ್ಥಿಗಳ ಪೋಷಕರೊಂದಿಗೆ ಹಂಚಿಕೊಳ್ಳಲು ಗಂಡು ಹಾಗೂ ಹೆಣ್ಣು ಮಕ್ಕಳ 2,950 ಪರ್ಯಾಯ ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.
ಆದರೆ, ಪಟ್ಟಿಯ ಹಲವು ಹೆಸರುಗಳು ಪುನರಾವರ್ತಿತ ಹಾಗೂ ತಪ್ಪಾಗಿದ್ದವು. ಅದರಲ್ಲಿ ಭಿಕ್ಷಾ (ಭಿಕ್ಷೆ), ಭಯಂಕರ (ಭಯಾನಕ), ಕಲಿಯುಗಿ (ಕತ್ತಲೆಯ ಯುಗ), ಲಜ್ಜಾ (ನಾಚಿಕೆ) ಮತ್ತು ಮಕ್ಕಿ (ನೊಣ) ಮುಂತಾದ ಹೆಸರುಗಳಿದ್ದುವು.
ಈ ಕ್ರಮ ವಿವಾದಕ್ಕೆ ಕಾರಣವಾಯಿತು. ಇದು ವೈಯುಕ್ತಿಕ ವಿಷಯದಲ್ಲಿ ಹಸ್ತಕ್ಷೇಪ ಎಂದು ಪೋಷಕರು, ಶಿಕ್ಷಕರು ಹಾಗೂ ತಜ್ಞರು ಬಣ್ಣಿಸಿದ್ದರು. ಈ ಅಭಿಯಾನವು ವಿದ್ಯಾರ್ಥಿಗಳನ್ನು ಶಸಕ್ತಗೊಳಿಸುವ ಬದಲು ಅವರನ್ನು ಅವಮಾನಿಸಬಹುದು ಎಂದು ಟೀಕಾಕಾರರು ಗಮನ ಸೆಳೆದಿದ್ದರು.
ಈ ಪಟ್ಟಿಯ ಅಸಂಗತತೆ, ಲಿಂಗದ ಕುರಿತು ಗೊಂದಲ, ತಪ್ಪಾದ ವರ್ಗೀಕರಣ ಮತ್ತು ಸಣ್ಣ ಬದಲಾವಣೆಯೊಂದಿಗೆ ಹೆಸರುಗಳ ಪುನರಾವರ್ತನೆಗಳನ್ನು ಗಮನಿಸಿದ ತಜ್ಞರು, ಈ ಆದೇಶ ದಲಿತ, ಬುಡಕಟ್ಟು ಹಾಗೂ ಇತರ ಹಿಂದುಳಿದ ಸಮುದಾಯಗಳ ಮೇಲೆ ''ಸಾಂಸ್ಕೃತಿಕ ಚೌಕಟ್ಟನ್ನು ಹೇರುವ'' ಪ್ರಯತ್ನ ಎಂದು ಟೀಕಿಸಿದ್ದರು.

