ನವದೆಹಲಿ: ಆಮ್ ಆದ್ಮಿ ಪಕ್ಷವನ್ನು (ಎಎಪಿ) ತೊರೆದು ಬಿಜೆಪಿ ಸೇರ್ಪಡೆಗೊಂಡಿರುವ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಈ ಕುರಿತು ಮಗದೊಮ್ಮೆ ಸ್ಪಷ್ಟನೆ ನೀಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಬಿಡುಗಡೆ ಮಾಡಿರುವ ಚಡ್ಡಾ, ತಮ್ಮ ಪಕ್ಷಾಂತರವನ್ನು ಪ್ರಶ್ನಿಸುತ್ತಿದ್ದವರಿಗೆ ಉತ್ತರ ನೀಡಿದ್ದಾರೆ.
'ಕಳೆದ ಮೂರು ದಿನಗಳಿಂದ ಸಾಕಷ್ಟು ಸಂದೇಶಗಳು ಬರುತ್ತಿವೆ. ಹೆಚ್ಚಿನವರು ನನ್ನನ್ನು ಅಭಿನಂದಿಸುತ್ತಿದ್ದಾರೆ. ಆದರೆ ಕೆಲವು ನನ್ನ ನಿರ್ಧಾರದ ಹಿಂದಿನ ಕಾರಣಗಳನ್ನು ತಿಳಿಯಲು ಬಯಸುತ್ತಾರೆ. ಅವರಿಗಾಗಿ ಈ ವಿಡಿಯೊ ಹಂಚುತ್ತಿದ್ದೇನೆ' ಎಂದಿದ್ದಾರೆ.
'ನಾನು ಒಬ್ಬನೇ ಅಲ್ಲ. ಇಬ್ಬರಲ್ಲ, ಮೂವರಲ್ಲ, ನಾಲ್ವರಲ್ಲ, ಐವರಲ್ಲ. ಇತರೆ ಆರು ಸಂಸದರು ಸೇರಿದಂತೆ ಒಟ್ಟು ಏಳು ಮಂದಿ ಸದಸ್ಯರು ರಾಜಕೀಯ ಪಕ್ಷವೊಂದರ ಸಂಬಂಧವನ್ನು ಮುರಿಯಲು ನಿರ್ಧರಿಸಿದ್ದಾರೆ. ಒಬ್ಬ ವ್ಯಕ್ತಿಯ ನಿರ್ಧಾರ ತಪ್ಪಾಗಿರಬಹುದು. ಇಬ್ಬರದ್ದು ತಪ್ಪಾಗಿರಬಹುದು. ಆದರೆ ಎಲ್ಲ ಏಳು ಜನರದ್ದು ತಪ್ಪಾಗಲು ಸಾಧ್ಯವಿಲ್ಲ' ಎಂದು ಟೀಕಾಕಾರರಿಗೆ ಉತ್ತರಿಸಿದ್ದಾರೆ.
'ಸ್ನೇಹಿತರೇ, ರಾಜಕೀಯಕ್ಕೆ ಬರುವ ಮೊದಲು ನಾನು ಸಿಎ ಆಗಿದ್ದೆ. ನನ್ನ ಮುಂದೆ ವೃತ್ತಿಜೀವನ ಇತ್ತು. ಅದನ್ನು ಬಿಟ್ಟು ರಾಜಕಾರಣಕ್ಕೆ ಬಂದೆ. ನನ್ನ ವೃತ್ತಿಯನ್ನು ರೂಪಿಸಲು ರಾಜಕೀಯಕ್ಕೆ ಬಂದಿಲ್ಲ' ಎಂದಿದ್ದಾರೆ.
'ನನ್ನನ್ನು ಸಂಸತ್ತಿನಲ್ಲಿ ಮಾತನಾಡದಂತೆ ತಡೆಯಲಾಗಿದೆ' ಎಂದು ರಾಜ್ಯಸಭೆಯ ಎಎಪಿಯ ಉಪನಾಯಕ ಸ್ಥಾನದಿಂದ ಕೆಳಗಿಳಿಸಿರುವ ಕುರಿತು ಚಡ್ಡಾ ಪ್ರತಿಕ್ರಿಯಿಸಿದ್ದಾರೆ.
'ಈ ರಾಜಕೀಯ ಪಕ್ಷವು ಭ್ರಷ್ಟರ ಕೈಯಲ್ಲಿದೆ. ಅವರು ರಾಷ್ಟ್ರಕ್ಕಾಗಿ ಕೆಲಸ ಮಾಡುತ್ತಿಲ್ಲ. ತಮ್ಮ ಸ್ವಂತ ಲಾಭಕ್ಕಾಗಿ ಮಾತ್ರ' ಎಂದು ಎಎಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
'ರಾಜಕೀಯ ತೊರೆಯುವುದು, ಅಲ್ಲೇ ಇದ್ದು ಎಎಪಿಯನ್ನು ಸರಿಪಡಿಸುವುದು ಮತ್ತು ನನ್ನ ಶಕ್ತಿ ಹಾಗೂ ಅನುಭವವನ್ನು ತೆಗೆದುಕೊಂಡು ಸಕರಾತ್ಮಕ ರಾಜಕೀಯ ಮಾಡುವುದು ನನ್ನ ಮುಂದಿರುವ ಆಯ್ಕೆಗಳಾಗಿದ್ದವು' ಎಂದು ಹೇಳಿದ್ದಾರೆ.
ಎಎಪಿಯ ರಾಜ್ಯಸಭಾ ಸದಸ್ಯರಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್, ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸ್ವಾತಿ ಮಾಲಿ
ವಾಲ್, ಮಾಜಿ ಕ್ರಿಕೆಟಿಗ ಹರಭಜನ್ ಸಿಂಗ್, ರಾಜಿಂದರ್ ಗುಪ್ತಾ ಮತ್ತು ವಿಕ್ರಂ ಸಾಹ್ನಿ ಅವರು ಬಿಜೆಪಿ ಸೇರುವುದಾಗಿ ಶುಕ್ರವಾರ ಘೋಷಿಸಿದ್ದರು. ಇದಕ್ಕೆ ಪ್ರತಿಯಾಗಿ ಚಡ್ಡಾ ಅವರನ್ನು ದೇಶದ್ರೋಹಿ ಎಂದು ಎಎಪಿ ತಿರುಗೇಟು ನೀಡಿತ್ತು.

