ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ವಿರುದ್ಧದ ಹೋರಾಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ವಿರೋಧ ಪಕ್ಷಗಳು ಮುಂದಾಗಿವೆ.
ಎಸ್ಐಆರ್ ವಿಚಾರವನ್ನೇ ಮುಂದಿಟ್ಟುಕೊಂಡು, ಭಾರತ ಚುನಾವಣಾ ಆಯೋಗದ ಮುಖ್ಯ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವ ಸಲುವಾಗಿ ಮತ್ತೊಮ್ಮೆ ನೋಟಿಸ್ ಸಲ್ಲಿಸುವ ಕುರಿತು ಇಂಡಿಯಾ ಒಕ್ಕೂಟ ಚಿಂತನೆ ನಡೆಸುತ್ತಿದೆ.
ಈ ಮೊದಲು ವಿರೋಧ ಪಕ್ಷಗಳು ನೀಡಿದ್ದ ಪದಚ್ಯುತ ನೋಟಿಸಿಗೆ ಏಪ್ರೀಲ್ 6 ರಂದು ಸೋಲಾಗಿತ್ತು. ವಿವಿಧ ಕಾರಣಗಳನ್ನು ನೀಡಿ ಸ್ಪೀಕರ್ ಅವರು ನೋಟಿಸ್ ಅನ್ನು ರದ್ದು ಮಾಡಿದ್ದರು.
ಇದೀಗ ಮತ್ತೆ ನೋಟಿಸ್ ನೀಡಲು ವಿರೋಧ ಪಕ್ಷಗಳು ತಯಾರು ನಡೆಸಿವೆ. ಆದರೆ ಅಂತಿಮ ನಿರ್ಧಾರವಾಗಿಲ್ಲ. ರಾಜ್ಯಸಭೆಯಲ್ಲಿ ನೋಟಿಸ್ ನೀಡಬೇಕೋ ಅಥವಾ ಲೋಕಸಭೆಯಲ್ಲಿ ನೋಟಿಸ್ ನೀಡಬೇಕೋ ಎಂಬುದೂ ನಿರ್ಧಾರವಾಗಿಲ್ಲ ಎಂಬುದಾಗಿ ತಿಳಿದು ಬಂದಿದೆ.
ಮಹಿಳಾ ಮೀಸಲಾತಿ ಮಸೂದೆ ಸೋಲಿಸಿರುವ ಖುಷಿಯಲ್ಲಿರುವ ವಿರೋಧ ಪಕ್ಷಗಳು ಸಿಇಸಿ ವಿಚಾರ ಮುಂದಿಟ್ಟುಕೊಂಡು ಮತ್ತೊಮ್ಮೆ ಮೋದಿ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ತಂತ್ರ ರೂಪಿಸಿವೆ ಎನ್ನಲಾಗಿದೆ.
ಇನ್ನೊಂದೆಡೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮೋದಿ ಸರ್ಕಾರಕ್ಕೆ ಅಗತ್ಯ ಸಂಖ್ಯಾಬಲ ಇದೆ. ಹೀಗಾಗಿ, ವಿರೋಧ ಪಕ್ಷಗಳ ಯಾವುದೇ ನಡೆಯನ್ನು ವಿಫಲಗೊಳಿಸಲು ಸರ್ಕಾರಕ್ಕೆ ಕಷ್ಟವಾಗುವುದಿಲ್ಲ ಎಂಬೂದು ಮೇಲ್ನೋಟಕ್ಕೆ ಕಂಡು ಬರುವಂಥದ್ದು.
ಎಸ್ಐಆರ್ ಮೂಲಕ ಸಿಇಸಿ ಅವರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ.

