ಗ್ಯಾಂಗ್ಟಕ್: ಈಶಾನ್ಯ ಭಾರತದ 8 ರಾಜ್ಯಗಳನ್ನು 'ಅಷ್ಟಲಕ್ಷ್ಮಿ'ಯರು ಎಂದು ಕರೆದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಪೂರ್ವಕ್ಕಾಗಿ ಕೆಲಸ, ಪೂರ್ವದ ರಾಜ್ಯಗಳಿಗಾಗಿ ವೇಗದ ಕೆಲಸ ಎಂಬ ಮಾತಿಗ ನಮ್ಮ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.
ಈ ರಾಜ್ಯಗಳು ಸಮೃದ್ಧಿ, ಸಂಪತ್ತು ಮತ್ತು ಶುಭದ ಬಹುಮುಖಿ ಸ್ವರೂಪವನ್ನು ಪ್ರತಿನಿಧಿಸುತ್ತವೆ ಎಂದು ಹೇಳಿದ್ದಾರೆ.
ಪ್ರವಾಸೋದ್ಯಮವು ಸಿಕ್ಕಿಂನ ಆರ್ಥಿಕತೆಯ ಮುಖ್ಯ ಆಧಾರವಾಗಿದೆ ಎಂದು ಪ್ರತಿಪಾದಿಸಿದ ಮೋದಿ, ಪ್ರವಾಸಿಗರ ಆಗಮನ ಹೆಚ್ಚಾಗಲು ರಾಜ್ಯದ ಸಂಪರ್ಕವನ್ನು ಹೆಚ್ಚಿಸುವತ್ತ ತಮ್ಮ ಸರ್ಕಾರದ ಗಮನವಿದೆ ಎಂದು ಹೇಳಿದ್ದಾರೆ.
'ಪ್ರವಾಸಿಗರ ಸಂಖ್ಯೆ ಹೆಚ್ಚಿಸಲು ಪಶ್ಚಿಮ ಬಂಗಾಳದ ಬಾಗ್ಡೋಗ್ರಾದಿಂದ ಎಕ್ಸ್ಪ್ರೆಸ್ವೇ ಮತ್ತು ಗ್ಯಾಂಗ್ಟಕ್ನಲ್ಲಿ ರಿಂಗ್ ರಸ್ತೆಯನ್ನು ನಿರ್ಮಿಸುವುದು ಸೇರಿದಂತೆ ಸಿಕ್ಕಿಂನ ಮೂಲಸೌಕರ್ಯವನ್ನು ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ'ಎಂದು ಸಿಕ್ಕಿಂ ರಾಜ್ಯದ 50ನೇ ರಾಜ್ಯೋತ್ಸವ ಹಿನ್ನೆಲೆ ನಡೆದ ಸಮಾರಂಭದಲ್ಲಿ ಮೋದಿ ಹೇಳಿದ್ದಾರೆ.
ರಾಜ್ಯದಲ್ಲಿ ರೋಪ್ವೇ ಮತ್ತು ಸ್ಕೈವೇ ಯೋಜನೆಗಳು ಆರಂಭವಾಗಲಿದ್ದು, ಹೆಚ್ಚಿನ ಪ್ರವಾಸಿಗರ ಒಳಹರಿವು ಖಚಿತಪಡಿಸಿಕೊಳ್ಳಲು ನಾಥುಲಾದಲ್ಲಿ ಎಕ್ಸ್ಪ್ರೆಸ್ವೇ ನಿರ್ಮಿಸಲಾಗುವುದು ಎಂದು ಹೇಳಿದರು.
ಸಿಕ್ಕಿಂ ಸೇರಿದಂತೆ ಈಶಾನ್ಯ ರಾಜ್ಯಗಳು ಭಾರತದ ಅಷ್ಟಲಕ್ಷ್ಮಿಯರು. ಸರ್ಕಾರವು ಪೂರ್ವರಾಜ್ಯಗಳಲ್ಲಿ ವೇಗವಾಗಿ ಕೆಲಸ ಮಾಡುವ ಸಂಕಲ್ಪ ಹೊಂದಿದೆ ಎಂದು ಮೋದಿ ಹೇಳಿದ್ದಾರೆ.
ಸಿಕ್ಕಿಂ ರಾಜ್ಯದ ಜೀವವೈವಿಧ್ಯತೆಯನ್ನು ಬಣ್ಣಿಸಿದ ಅವರು, ಸಿಕ್ಕಿಂನಲ್ಲಿ ಪ್ರಕೃತಿ ಮತ್ತು ಸಂಸ್ಕೃತಿ ಜೀವಂತವಾಗಿದೆ. ರಾಜ್ಯದ ರಸ್ತೆಗಳ ಸ್ವಚ್ಛತೆ ಮತ್ತು ಗಾಳಿಯ ಶುದ್ಧತೆಯು ಇಲ್ಲಿನ ಜನರು ಪ್ರಕೃತಿ ಸಂರಕ್ಷಣೆಗೆ ನಿಜವಾದ ರಾಯಭಾರಿಗಳು ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ.
ಸಿಕ್ಕಿಂ ಸೇರಿದಂತೆ ಈಶಾನ್ಯದ ರಾಜ್ಯಗಳು ಸಾವಯವ ಕೃಷಿಯಂತಹ ಉಪಕ್ರಮಗಳ ಮೂಲಕ ಭವಿಷ್ಯದ ಬೆಳವಣಿಗೆ ಮತ್ತು ಸುಸ್ಥಿರ ಅಭಿವೃದ್ಧಿಯ ಕೇಂದ್ರವಾಗಲು ಸಜ್ಜಾಗಿವೆ ಎಂದು ಮೋದಿ ಪ್ರತಿಪಾದಿಸಿದರು.
ಶಾಂತಿ, ಆಧ್ಯಾತ್ಮಿಕತೆ ಮತ್ತು ಆರೋಗ್ಯದ ನೆಲೆಯಾಗಿದೆ ಎಂದು ಸಿಕ್ಕಿಂ ಅನ್ನು ಪ್ರಶಂಸಿಸಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವಂತೆ ಪ್ರವಾಸಿಗರನ್ನು ಒತ್ತಾಯಿಸಿದರು. ನೈಸರ್ಗಿಕ ಸೌಂದರ್ಯ ಸವಿಯಲು ಈಶಾನ್ಯದ ಸ್ವರ್ಗ ಸಇಕ್ಕಿಂಗೆ ಭೇಟಿ ನೀಡಿ ಎಂದಿದ್ದಾರೆ.
'ಸಿಕ್ಕಿಂನಲ್ಲಿ ಪರಿಸರ ಸ್ವಾಸ್ಥ್ಯ ಪ್ರವಾಸೋದ್ಯಮಕ್ಕೆ ಅಪಾರ ಅವಕಾಶಗಳಿವೆ. ಇದನ್ನು ಸರ್ಕಾರ ಉತ್ತೇಜಿಸುತ್ತಿದೆ. 1,000 ಹೋಂಸ್ಟೇಗಳನ್ನು ನಿರ್ಮಿಸಲಾಗುತ್ತಿದೆ. ಸಾಹಸ ಪ್ರವಾಸೋದ್ಯಮವು ಮೂಲಸೌಕರ್ಯವನ್ನು ಹೆಚ್ಚಿಸುತ್ತಿದೆ'ಎಂದು ಹೇಳಿದರು.
ಧರ್ಮ ಮತ್ತು ರಾಜಕೀಯದ ಮೂಲದ ದೇಶವನ್ನು ಇಬ್ಭಾಗಿಸುವ ಯತ್ನ ನಡೆಯುತ್ತಿರುವ ಸಂದರ್ಭದಲ್ಲಿ ಸಿಕ್ಕಿಂ ರಾಜ್ಯವು 'ಏಕ ಭಾರತ, ಶ್ರೇಷ್ಠ ಭಾರತ' ಎಂಬ ಘೋಷವಾಕ್ಯ ಪ್ರತಿಬಿಂಬಿಸಿದೆ ಎಂದಿದ್ದಾರೆ.

