ಪಟ್ನಾ: ಬಿಹಾರ ರಾಜಕಾರಣದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು ಮುಖ್ಯಮಂತ್ರಿ ನಿತೀಶ್ ಕುಮಾರ್ ದೆಹಲಿಗೆ ತೆರಳುತ್ತಿದ್ದಂತೆಯೇ, ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುವ ಪೋಸ್ಟರ್ಗಳು ರಾರಾಜಿಸುತ್ತಿವೆ.
ಇಲ್ಲಿನ ಬಿಜೆಪಿ ಕಚೇರಿಯ ಹೊರಭಾಗದಲ್ಲಿಯೇ ಪೋಸ್ಟರ್ಗಳು ಪ್ರತ್ಯಕ್ಷವಾಗಿವೆ.
ಇವು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿವೆ.
ಬಿಜೆಪಿ ಕಚೇರಿ ಮುಂದೆ ಕಂಡುಬಂದ ಪೋಸ್ಟರ್ಗಳಲ್ಲಿ ಸಾಮ್ರಾಟ್ ಚೌಧರಿ ಬಿಹಾರದ ನೂತನ ಮುಖ್ಯಮಂತ್ರಿ ಎಂದು ಬಿಂಬಿಸಲಾಗಿದೆ. ವಿಶೇಷವೆಂದರೆ, ಈ ಪೋಸ್ಟರ್ಗಳ ಮೇಲೆ 'ವಾಲ್ಮೀಕಿ ಸಮಾಜ' ಎಂಬ ಲೇಬಲ್ ಹಾಕಲಾಗಿದೆ.
ರಾಜಧಾನಿಯಲ್ಲಿ ಪೋಸ್ಟರ್ಗಳು ಹರಿದಾಡುತ್ತಿದ್ದಂತೆಯೇ ಎಚ್ಚೆತ್ತ ಬಿಜೆಪಿ ಕಚೇರಿಯ ಸಿಬ್ಬಂದಿ ಅವುಗಳಲ್ಲಿ ಕೆಲವನ್ನು ತೆರವುಗೊಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯ ಮಾಧ್ಯಮ ಉಸ್ತುವಾರಿ ಡ್ಯಾನಿಶ್ ಇಕ್ಬಾಲ್, ಈ ಪೋಸ್ಟರ್ಗಳನ್ನು ಯಾರು ಹಾಕಿದ್ದಾರೆ ಎಂಬುದು ನಮಗೆ ತಿಳಿದಿಲ್ಲ. ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ ಎಂದು ಹೇಳಿದ್ದಾರೆ.
ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ?
ಕಳೆದ ತಿಂಗಳಷ್ಟೇ 75 ವರ್ಷ ಪೂರೈಸಿದ ನಿತೀಶ್ ಕುಮಾರ್ ಅವರು ಶೀಘ್ರದಲ್ಲೇ ಸಿಎಂ ಹುದ್ದೆ ತ್ಯಜಿಸಲಿದ್ದಾರೆ ಎಂಬ ವದಂತಿಗಳು ಬಲವಾಗಿವೆ. ಅವರು ರಾಜ್ಯಸಭಾ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲು ದೆಹಲಿಗೆ ತೆರಳಿದ್ದು, ಮುಂದಿನ ವಾರ ತಮ್ಮ ಕೊನೆಯ ಸಚಿವ ಸಂಪುಟ ಸಭೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಯಾರು ಈ ಸಾಮ್ರಾಟ್ ಚೌಧರಿ?
ಮುಖ್ಯಮಂತ್ರಿ ರೇಸ್ನಲ್ಲಿ ಮುಂಚೂಣಿಯಲ್ಲಿರುವ ಸಾಮ್ರಾಟ್ ಚೌಧರಿ ಅವರು ಬಿಜೆಪಿಗೆ ಸೇರಿದ ಕೇವಲ ಹತ್ತು ವರ್ಷಗಳಲ್ಲಿ ಅಸಾಧಾರಣ ಬೆಳವಣಿಗೆ ಕಂಡಿದ್ದಾರೆ.
ಇವರು ಬಿಹಾರದ ಪ್ರಭಾವಿ ಓಬಿಸಿಯ ಕೋಯೆರಿ (ಏoeಡಿi) ಸಮುದಾಯಕ್ಕೆ ಸೇರಿದವರು. ಈ ಸಮುದಾಯದ ಮತಗಳನ್ನು ಸೆಳೆಯಲು ಬಿಜೆಪಿ ಮತ್ತು ಆರ್ಜೆಡಿ ನಡುವೆ ತೀವ್ರ ಪೈಪೋಟಿ ಇದೆ. 2023ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಸಾಮ್ರಾಟ್ ಚೌಧರಿ ಇದೀಗ ಉಪಮುಖ್ಯಮಂತ್ರಿಯಾಗಿದ್ದಾರೆ. ಅತ್ಯಂತ ಪ್ರಭಾವಿ ಎನಿಸಿಕೊಂಡಿರುವ ಗೃಹ ಖಾತೆಯನ್ನು ಸಾಮ್ರಾಟ್ ಚೌಧರಿ ನಿಭಾಯಿಸುತ್ತಿದ್ದಾರೆ.
ಏಪ್ರಿಲ್ 14ರ ನಂತರ ಹೊಸ ಸರ್ಕಾರ?
ಹಮೂಲಗಳ ಪ್ರಕಾರ ಏಪ್ರಿಲ್ 14ರ ನಂತರ ಬಿಹಾರದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಮೂಲಗಳು ಖಚಿತಪಡಿಸಿವೆ. ಸರ್ಕಾರದ ಪ್ರಮಾಣ ವಚನ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುವರು ಎನ್ನಲಾಗಿದೆ.
ಯಾವಾಗಲೂ ಅನಿರೀಕ್ಷಿತ ನಿರ್ಧಾರಗಳಿಗೆ ಹೆಸರುವಾಸಿಯಾಗಿರುವ ಬಿಜೆಪಿ ಹೈಕಮಾಂಡ್, ಕೊನೆಯ ಕ್ಷಣದಲ್ಲಿ ಯಾವುದೇ 'ಸರ್ಪ್ರೈಸ್' ಸಿಎಂ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಿದರೂ ಆಶ್ಚರ್ಯವಿಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

