ನವದೆಹಲಿ: ದೆಹಲಿಯಲ್ಲಿ ₹45 ಕೋಟಿ ಮೌಲ್ಯದ ಜಮೀನನ್ನು ಮೋಸದಿಂದ ಸ್ವಾಧೀನಪಡಿಸಿಕೊಂಡ ಆರೋಪದಡಿ ಹಣ ಅಕ್ರಮ ವರ್ಗಾವಣೆ ತಡೆ (ಪಿಎಂಎಲ್) ಕಾಯ್ಡೆಯಡಿ ದಾಖಲಿಸಿದ್ದ ಪ್ರಕರಣದಲ್ಲಿ ಅಲ್ ಫಲಾಹ್ ಸಮೂಹದ ಮುಖ್ಯಸ್ಥ ಜವಾದ್ ಅಹ್ಮದ್ ಸಿದ್ದೀಕಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಇಲ್ಲಿನ ನ್ಯಾಯಾಲಯ ಆದೇಶಿಸಿದೆ.
10 ದಿನಗಳ ಕಸ್ಟಡಿ ಅವಧಿ ಮುಗಿದ ಕಾರಣದಿಂದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶೀತಲ್ ಚೌಧರಿ ಮುಂದೆ ಸಿದ್ದೀಕಿ ಅವರನ್ನು ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಏಪ್ರಿಲ್ 17ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿದರು.
ಪಿಎಂಎಲ್ಎ ಅಡಿಯಲ್ಲಿ ಮಾರ್ಚ್ 24ರಂದು ಇ.ಡಿ ಅಧಿಕಾರಿಗಳು ಎರಡನೇ ಸಲ ಸಿದ್ದೀಕಿಯನ್ನು ಬಂಧಿಸಿದ್ದರು. ನಕಲಿ ದಾಖಲೆಗಳನ್ನು ಸೃಷ್ಟಿಸಿ, ಮೋಸದಿಂದ ಜಮೀನನ್ನು ವಶಕ್ಕೆ ಪಡೆದಿದನ್ನು ಇ.ಡಿ ಪತ್ತೆಹಚ್ಚಿತ್ತು. ಟಾರ್ಬಿಯಾ ಎಜುಕೇಶನ್ ಫೌಂಡೇಶನ್ ನಿರ್ದೇಶಕ ಹಾಗೂ ಬಹುಪಾಲು ಷೇರುದಾರರಾದ ಸಿದ್ದೀಕಿಯೇ ಕೆಲವು ವ್ಯಕ್ತಿಗಳೊಂದಿಗೆ ಸೇರಿಕೊಂಡು ಮೋಸವೆಸಗಿದ್ದು ತನಿಖೆ ವೇಳೆ ಕಂಡುಬಂದಿತ್ತು.
ವಿವಾದಿತ 1.4 ಎಕರೆ ಜಮೀನು ರಾಷ್ಟ್ರ ರಾಜಧಾನಿ ಮದನ್ಪುರ ಖಾದರ್ ಗ್ರಾಮದಲ್ಲಿದ್ದು, ಮಾರುಕಟ್ಟೆ ಮೌಲ್ಯವು ₹45 ಕೋಟಿಯಷ್ಟಿದೆ. ದಾಖಲೆಗಳ ಪ್ರಕಾರ, ಈ ಜಮೀನು ಖರೀದಿಗೆ ಕೇವಲ ₹75 ಲಕ್ಷ ನೀಡಲಾಗಿತ್ತು ಎಂದು ಇ.ಡಿ ತಿಳಿಸಿದೆ.
ಕಳೆದ ವರ್ಷ ನವೆಂಬರ್ 10ರಂದು ಕೆಂಪುಕೋಟೆಯಲ್ಲಿ ನಡೆದ ಸ್ಫೋಟದಲ್ಲಿ 15 ಮಂದಿ ಮೃತಪಟ್ಟಿದ್ದರು. ಈ ಸ್ಫೋಟದ ಹಿಂದೆ ಇದೇ ವಿಶ್ವವಿದ್ಯಾಲಯದ ವೈದ್ಯರ ಕೈವಾಡವಿರುವುದು ಕಂಡುಬಂದಿತ್ತು.

