ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಸಂಪುಟದಲ್ಲಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರ ಸಚಿವ ಸ್ಥಾನ ಅತಂತ್ರವಾಗಿದೆ ಎಂದು ಮೂಲಗಳು ತಿಳಿಸಿವೆ.
ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಉದ್ಯಮಗಳ ಖಾತೆ ಸಚಿವರಾಗಿರುವ ಅಜರುದ್ದೀನ್ ಅವರ ಸಚಿವ ಸ್ಥಾನ ಕೆಲವು ಸಾಂವಿಧಾನಿಕ ಕಾರಣಗಳಿಂದ ಅತಂತ್ರ ಸ್ಥಿತಿಯಲ್ಲಿದೆ ಎಂದು ರಾಜಭವನದ ಮೂಲಗಳು ಖಚಿತಪಡಿಸಿವೆ.
ಅಜರುದ್ದೀನ್ ಅವರು 2025ರ ಅಕ್ಟೋಬರ್ 31ರಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ, ಇವರು ವಿಧಾನಸಭೆ ಅಥವಾ ವಿಧಾನಪರಿಷತ್ತಿನ ಸದಸ್ಯರಾಗಿಲ್ಲ. ಸಚಿವರಾಗಿ ಆರು ತಿಂಗಳ ಒಳಗೆ, ಇವರು ಶಾಸಕರಾಗಿ ಒಂದೋ ಜನರಿಂದ ಆಯ್ಕೆಯಾಗಬೇಕಿತ್ತು ಅಥವಾ ಪರಿಷತ್ತಿನ ಸದಸ್ಯರಾಗಿ ಆಯ್ಕೆ ಇಲ್ಲವೇ ನಾಮನಿರ್ದೇಶನಗೊಳ್ಳಬೇಕಿತ್ತು.
ಇವರ ಈ ಆರು ತಿಂಗಳ ಅವಧಿಯು ಈಗ ಏಪ್ರಿಲ್ 30ಕ್ಕೆ ಕೊನೆಗೊಳ್ಳಲಿದೆ. ರಾಜ್ಯಪಾಲರ ಕೋಟಾದ ಅಡಿ ಇವರನ್ನು ವಿಧಾನಪರಿಷತ್ತಿಗೆ ನಾಮನಿರ್ದೇಶನ ಮಾಡುವಂತೆ ಸಂಪುಟ ಸಭೆಯು 2025ರ ಆಗಸ್ಟ್ನಲ್ಲಿಯೇ ಶಿಫಾರಸು ಮಾಡಿತ್ತು.
ಈ ಬಗ್ಗೆ ಇದುವರೆಗೂ ರಾಜ್ಯಪಾಲರು ಯಾವುದೇ ಕ್ರಮ ಕೈಗೊಂಡಿಲ್ಲ. ಏ.30ರೊಳಗೆ ರಾಜ್ಯಪಾಲರು ನಾಮನಿರ್ದೇಶನ ಮಾಡದಿದ್ದರೆ, ಅಜರುದ್ದೀನ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ.
ಕೆಲವು ದಿನಗಳ ಹಿಂದಿನವರೆಗೆ ತೆಲಂಗಾಣದ ರಾಜ್ಯಪಾಲರಾಗಿ ಜಿಷ್ಣು ದೇವ್ ವರ್ಮಾ ಅವರಿದ್ದರು. 2026ರ ಮಾರ್ಚ್ನಲ್ಲಿ ಶಿವ್ ಪ್ರತಾಪ್ ಶುಕ್ಲಾ ಅವರನ್ನು ರಾಜ್ಯದ ರಾಜ್ಯಪಾಲರನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಶುಕ್ಲಾ ಅವರು ಯಾವ ನಿಲುವು ತಳೆಯುತ್ತಾರೆ ಎನ್ನುವುದರ ಮೇಲೆ ಅಜರುದ್ದೀನ್ ಭವಿಷ್ಯ ನಿಂತಿದೆ.

