"ಭಾರತದ ಪ್ರದೇಶದ ಭಾಗವಾಗಿರುವ ಸ್ಥಳಗಳಿಗೆ ಕಾಲ್ಪನಿಕ ಹೆಸರುಗಳನ್ನು ಇಡಲು ಚೀನಾ ನಡೆಸುವ ಯಾವುದೇ ಕಿಡಿಗೇಡಿತನದ ಪ್ರಯತ್ನಗಳನ್ನು ಭಾರತವು ಸ್ಪಷ್ಟವಾಗಿ ತಿರಸ್ಕರಿಸುತ್ತದೆ" ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
"ಹುಸಿ ಹಕ್ಕೊತ್ತಾಯಗಳನ್ನು ಮಂಡಿಸುವುದು ಹಾಗೂ ಆಧಾರರಹಿತ ನಿರೂಪಣೆಗಳನ್ನು ಸೃಷ್ಟಿಸುವುದು, ಅರುಣಾಚಲ ಪ್ರದೇಶ ಸೇರಿದಂತೆ ಈ ಸ್ಥಳಗಳು ಎಂದೆಂದಿಗೂ ಭಾರತದ ಅವಿಭಾಜ್ಯ ಹಾಗೂ ಪ್ರತ್ಯೇಕಿಸಲಾಗದ ಭಾಗವಾಗಿವೆ ಮತ್ತು ಮುಂದೆಯೂ ಹಾಗೆಯೇ ಇರುತ್ತವೆ ಎಂಬ ನಿರಾಕರಿಸಲಾಗದ ವಾಸ್ತವವನ್ನು ಬದಲಾಯಿಸಲಾರವು" ಎಂದು ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಾ ತಿಳಿಸಿದರು.
ಅರುಣಾಚಲ ಪ್ರದೇಶದ ಸ್ಥಳಗಳಿಗೆ ಪುನರ್ ನಾಮಕರಣ ಮಾಡುವ ಚೀನಾದ ನಡೆ, ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಸ್ಥಿರಗೊಳಿಸುವ ಪ್ರಯತ್ನಗಳನ್ನು ದುರ್ಬಲಗೊಳಿಸುತ್ತದೆ ಎಂದು ಜೈಸ್ವಾಲ್ ಹೇಳಿದರು.
ದ್ವಿಪಕ್ಷೀಯ ಬಾಂಧವ್ಯಗಳಲ್ಲಿ ನಕಾರಾತ್ಮಕತೆಯನ್ನು ಒಳನುಗ್ಗಿಸುವ ಇಂತಹ ಕೃತ್ಯಗಳಿಂದ ಚೀನಾ ದೂರವಿರಬೇಕು ಎಂದು ಅವರು ಆಗ್ರಹಿಸಿದರು.
ಅರುಣಾಚಲ ಪ್ರದೇಶದ ಮೇಲೆ ತನ್ನ ಹಕ್ಕೊತ್ತಾಯವನ್ನು ಮಂಡಿಸುವ ಪ್ರಯತ್ನವಾಗಿ ಚೀನಾ ಈ ಗಡಿರಾಜ್ಯದ ಸ್ಥಳಗಳಿಗೆ ಮರುನಾಮಕರಣ ನಡೆಸಲು ಯತ್ನಿಸಿರುವುದು ಇದು ಆರನೇ ಸಲವಾಗಿದೆ.
ಇದಕ್ಕೂ ಮುನ್ನ ಮೇ 2025ರಲ್ಲಿ ಅರುಣಾಚಲದ 27 ಸ್ಥಳಗಳಿಗೆ ಮರುನಾಮಕರಣ ಮಾಡಲು ಚೀನಾ ನಡೆಸಿದ ಪ್ರಯತ್ನವನ್ನು ಭಾರತ ತಳ್ಳಿಹಾಕಿ ಅದನ್ನು ಅಸಂಬದ್ಧವೆಂದು ಬಣ್ಣಿಸಿತ್ತು.

