ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಸೇತುವೆಯೊಂದರಲ್ಲಿ ಸೋಮವಾರ ವಿರುದ್ಧ ಧಿಕ್ಕಿನಿಂದ ಬರುತ್ತಿದ್ದ ಸಿಮೆಂಟ್ ಮಿಕ್ಸರ್ ವಾಹನಕ್ಕೆ ವ್ಯಾನ್ ಢಿಕ್ಕಿ ಹೊಡೆದ ಪರಿಣಾಮ ಹನ್ನೊಂದು ಮಂದಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುರ್ಬಾದ್ನ ರೈಟಾ ಸೇತುವೆಯಲ್ಲಿ ಬೆಳಗ್ಗೆ ಸುಮಾರು 10.45ಕ್ಕೆ ಈ ಅಪಘಾತ ನಡೆದಿದೆ. ಕಲ್ಯಾಣ್ನಿಂದ ಮುರ್ಬಾದ್ ಕಡೆಗೆ ಹೋಗುತ್ತಿದ್ದ ವ್ಯಾನ್ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಸಿಮೆಂಟ್ ಮಿಕ್ಸರ್ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.
ಢಿಕ್ಕಿಯ ಪರಿಣಾಮ ತೀವ್ರವಾಗಿದ್ದು, ಎರಡೂ ವಾಹನಗಳಿಗೆ ತೀವ್ರ ಹಾನಿ ಉಂಟಾಗಿದೆ.
ಅಪಘಾತದ ಸಂದರ್ಭ ವ್ಯಾನ್ನಲ್ಲಿ ಹಲವು ಪ್ರಯಾಣಿಕರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದಲ್ಲಿ 8 ಮಂದಿ ಪುರುಷರು ಹಾಗೂ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಉಲ್ಲಾಸ್ನಗರದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಮುರ್ಬಾದ್ ತಹಶೀಲ್ದಾರ್ ಅಭಿಜಿತ್ ತಿಳಿಸಿದ್ದಾರೆ.
ಅಪಘಾತದ ನಂತರ ಕಲ್ಯಾಣ್-ಅಹಲ್ಯಾನಗರ ಮಾರ್ಗದಲ್ಲಿ ಹಲವು ಗಂಟೆಗಳ ಕಾಲ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಅನಂತರ ಸಂಚಾರ ಅಡಚಣೆಯನ್ನು ತೆರವುಗೊಳಿಸಲಾಯಿತು ಎಂದು ಅವರು ಹೇಳಿದ್ದಾರೆ.

