ಕೋಲ್ಕತ್ತ: ಕೋಲ್ಕತ್ತಾ ಪೊಲೀಸ್ ಉಪ ಕಮಿಷನರ್ ಶಾಂತನು ಸಿನ್ಹಾ ಬಿಸ್ವಾಸ್ ಮತ್ತು ಸ್ಥಳೀಯ ಉದ್ಯಮಿಯೊಬ್ಬರಿಗೆ ಸೇರಿದ ಸ್ಥಳಗಳ ಮೇಲೆ ಇ.ಡಿ ಭಾನುವಾರ ದಾಳಿ ನಡೆಸಿದೆ.
ಹಣ ಅಕ್ರಮ ವರ್ಗಾವಣೆ ತನಿಖೆಯ ಭಾಗವಾಗಿ ಈ ದಾಳಿ ನಡೆದಿದೆ.
ಬಿಸ್ವಾಸ್ ಅವರ ಬಾಲಿಗಂಜ್ ಪ್ರದೇಶದ ನಿವಾಸ ಸೇರಿದಂತೆ ಎರಡು ಸ್ಥಳಗಳಲ್ಲಿ, ಸನ್ ಎಂಟರ್ಪ್ರೈಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜಾಯ್ ಕಮ್ದಾರ್ ಎಂಬ ಉದ್ಯಮಿಗೆ ಸೇರಿದ ಒಂದು ಕಡೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಹೆಚ್ಚಿನ ವಿಚಾರಣೆಗಾಗಿ ಕಮ್ದಾರ್ ಅವರನ್ನು ಸ್ಥಳೀಯ ಇ.ಡಿ ಕಚೇರಿಗೆ ಕರೆದುಕೊಂಡು ಹೋಗಲಾಗಿದೆ. ಪಶ್ಚಿಮ ಬಂಗಾಳ ಮತ್ತು ಕೋಲ್ಕತ್ತ ಪೊಲೀಸ್ ಕಲ್ಯಾಣ ಸಮಿತಿಯ ಮುಖ್ಯ ಸಂಯೋಜಕ ಮತ್ತು ನೋಡಲ್ ಅಧಿಕಾರಿಯಾಗಿರುವ ಬಿಸ್ವಾಸ್ ದಾಳಿಯ ಸಮಯದಲ್ಲಿ ಸ್ಥಳದಲ್ಲಿ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಲೆ ಯತ್ನ ಮತ್ತು ಸುಲಿಗೆ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವ ಸ್ಥಳೀಯ ಕ್ರಿಮಿನಲ್ ವಿಶ್ವಜಿತ್ ಪೋದ್ದಾರ್ ಅಲಿಯಾಸ್ ಸೋನಾ ಪಪ್ಪು ಮತ್ತು ಆತನಿಗೆ ಸಂಬಂಧಿಸಿದ ಗುಂಪಿನ ವಿರುದ್ಧದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ. ಪ್ರಕರಣ ಸಂಬಂಧ ಏಪ್ರಿಲ್ 1 ರಂದು ಮೊದಲ ಸುತ್ತಿನ ಶೋಧ ಕಾರ್ಯ ನಡೆಸಲಾಗಿತ್ತು.
ಆ ವೇಳೆ ₹ 1.47 ಕೋಟಿ ನಗದು ಮತ್ತು ₹ 67.64 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿಯ ಜೊತೆಗೆ ನಾಡ ಬಂದೂಕು ವಶಪಡಿಸಿಕೊಳ್ಳಲಾಗಿತ್ತು.
ಗಲಭೆ, ಕೊಲೆ ಯತ್ನ, ಕ್ರಿಮಿನಲ್ ಪಿತೂರಿ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಉಲ್ಲಂಘನೆಯಡಿ ದಾಖಲಾಗಿರುವ ಪ್ರಕರಣ ಸಂಬಂಧ ಪೋದ್ದಾರ್ ವಿರುದ್ಧ ಕೋಲ್ಕತ್ತ ಪೊಲೀಸರು ದಾಖಲಿಸಿರುವ ಎಫ್ಐಆರ್ ಆಧರಿಸಿ ಈ ತನಿಖೆ ನಡೆಯುತ್ತಿದೆ.
ಕೋಲ್ಕತ್ತಾದ ಗೋಲ್ಪಾರ್ಕ್ ಬಳಿಯ ಕಂಕುಲಿಯಾ ರಸ್ತೆಯಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿರುವ ಪೋದ್ದಾರ್ ಸದ್ಯ ತಲೆಮರೆಸಿಕೊಂಡಿದ್ದಾನೆ. ಇಡಿ ಪೋದ್ದಾರ್ಗೆ ಸಮನ್ಸ್ ಜಾರಿ ಮಾಡಿದ್ದರೂ, ಆತ ಇದುವರೆಗೆ ತನಿಖೆಗೆ ಹಾಜರಾಗಿಲ್ಲ ಎಂದು ಸಂಸ್ಥೆ ತಿಳಿಸಿದೆ.
ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು ಏಪ್ರಿಲ್ 29 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.

