ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಚುನಾವಣೆಗೆ ಒಂದು ದಿನ ಮುನ್ನ ನ್ಯಾಯಾಲಯದ ಈ ಕಟು ಹೇಳಿಕೆ ಹೊರಬಿದ್ದಿದೆ.
ಟಿಎಂಸಿಗಾಗಿ ಕೆಲಸ ಮಾಡುವ I-PAC ಕುರಿತು ತನ್ನ ತನಿಖೆ ಮತ್ತು ಅದರ ಕಚೇರಿಗಳಲ್ಲಿ ಶೋಧ ಕಾರ್ಯಾಚರಣೆಗಳಲ್ಲಿ ಬ್ಯಾನರ್ಜಿ ಮತ್ತು ರಾಜ್ಯದ ಅಧಿಕಾರಿಗಳು ಮಧ್ಯಪ್ರವೇಶಿಸಿದ್ದರು ಎಂದು ಇಡಿ ಆರೋಪಿಸಿದೆ. ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜನವರಿ ಆರಂಭದಲ್ಲಿ ಈ ದಾಳಿಗಳು ನಡೆದಿದ್ದವು.
ಇದು ರಾಜ್ಯ ಮತ್ತು ಕೇಂದ್ರದ ನಡುವಿನ ವಿವಾದವಲ್ಲ. ಯಾವುದೇ ರಾಜ್ಯದ ಮುಖ್ಯಮಂತ್ರಿ ತನಿಖೆಯ ನಡುವೆ ಪ್ರವೇಶಿಸುವಂತಿಲ್ಲ; ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ಸಿಲುಕಿಸುವಂತಿಲ್ಲ ಮತ್ತು ಬಳಿಕ ಇದನ್ನು ರಾಜ್ಯ-ಕೇಂದ್ರ ವಿವಾದವನ್ನಾಗಿ ಮಾಡಬಾರದು ಎಂದು ಸರ್ವೋಚ್ಚ ನ್ಯಾಯಾಲಯ ಕುಟುಕಿತು.
ಇಡಿ ಪ್ರಕಾರ, ಅಧಿಕಾರಿಗಳೊಂದಿಗೆ I-PAC ಕಚೇರಿ ಮತ್ತು ಅದರ ಸ್ಥಾಪಕ ಪ್ರತೀಕ್ ಜೈನ್ ಅವರ ನಿವಾಸವನ್ನು ಪ್ರವೇಶಿಸಿದ್ದ ಬ್ಯಾನರ್ಜಿ ಲ್ಯಾಪ್ಟಾಪ್, ಫೋನ್ ಮತ್ತು ಹಲವಾರು ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದರು.
ಇಡಿ ದಾಳಿಗಳು ರಾಜಕೀಯ ಪ್ರೇರಿತವಾಗಿವೆ ಮತ್ತು ಚುನಾವಣೆಗೆ ಮುನ್ನ ಟಿಎಂಸಿಯನ್ನು ದುರ್ಬಲಗೊಳಿಸುವ ಉದ್ದೇಶ ಹೊಂದಿವೆ ಎಂದು ಸರ್ಕಾರ ಆರೋಪಿಸಿತ್ತು.
ಸಂವಿಧಾನ ನಿರ್ಮಾತೃರೂ ಇಂತಹ ಕೃತ್ಯವನ್ನು ಒಪ್ಪುತ್ತಿರಲಿಲ್ಲ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯ, ಒಂದು ದಿನ ದೇಶದ ಹಾಲಿ ಮುಖ್ಯಮಂತ್ರಿಯೋರ್ವರು ತನಿಖೆ ನಡೆಯುವ ವೇಳೆ ಮಧ್ಯೆ ಪ್ರವೇಶಿಸುವ ಸ್ಥಿತಿ ಬರುತ್ತದೆ ಎಂದು ಅವರಲ್ಲಿ ಒಬ್ಬರೂ ಊಹಿಸಿರಲಿಲ್ಲ ಎಂದು ಕುಟುಕಿತು.

