ಮೊದಲ ಮತ್ತು ಎರಡನೆ ಹಂತದ ಮತಪಟ್ಟಿಗಳ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ವೇಳೆ ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿರುವ ಮತದಾರರ ದತ್ತಾಂಶವನ್ನು ತನ್ನೊಂದಿಗೆ ಹಂಚಿಕೊಳ್ಳುವಂತೆ ಫೆಬ್ರವರಿ ತಿಂಗಳಲ್ಲಿ ಚುನಾವಣಾ ಆಯೋಗಕ್ಕೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಪತ್ರ ಬರೆದಿತ್ತು. ಇದರ ಉದ್ದೇಶ ಆಧಾರ್ ದತ್ತಾಂಶವನ್ನು ಪರಿಷ್ಕರಿಸುವುದಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು ಮೃತರ ಆಧಾರ್ ಸಂಖ್ಯೆಗಳನ್ನು ನಿಯಮಿತವಾಗಿ ತೆಗೆದು ಹಾಕುತ್ತದೆ.
ಆದರೆ, ಈ ಮನವಿಯ ಕುರಿತು ಚುನಾವಣಾ ಆಯೋಗ ಈವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ದತ್ತಾಂಶಗಳು ಕೇವಲ ಚುನಾವಣಾ ಆಯೋಗಕ್ಕೆ ಮಾತ್ರ ಸೇರಿದ್ದು, ಅದನ್ನು ಸರಕಾರಿ ಸಂಸ್ಥೆಗಳು ಸೇರಿದಂತೆ ಬಾಹ್ಯ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚುನಾವಣಾ ಆಯೋಗ ಸ್ವತಂತ್ರ ಶಾಸನಾತ್ಮಕ ಸಂಸ್ಥೆಯಾಗಿದ್ದು, ತನ್ನ ದತ್ತಾಂಶಗಳ ಸಮಗ್ರತೆಯನ್ನು ಅದು ಕಾಪಾಡಬೇಕಿದೆ ಎಂದೂ ಅವರು ಹೇಳಿದ್ದಾರೆ.

