ತಿರುವನಂತಪುರಂ: ಕೇರಳದಲ್ಲಿ ಆಡಳಿತ ವಿರೋಧಿ ಅಲೆಗೆ ಸಿಲುಕಿದ ಸಿಪಿಐ(ಎಂ) ನೇತೃತ್ವದ ಎಡರಂಗ ಛಿದ್ರಗೊಂಡಿದ್ದು, ಕಾಂಗ್ರೆಸ್ ನೇತೃತ್ವದ ಐಕ್ಯರಂಗ ಭರ್ಜರಿ ಕೆಲುವು ದಾಖಲಿಸಿಕೊಂಡಿದೆ.
ಒಟ್ಟು 140ಸ್ಥಾನಗಳಲ್ಲಿ 102 ಸ್ಥಾನದಲ್ಲಿ ಐಕ್ಯರಂಗ ಗೆಲುವು ಸಾಧಿಸಿದೆ. ಇದೇ ಮೊದಲ ಬಾರಿಗೆ ಕೇರಳದಲ್ಲಿ ಬಿಜೆಪಿ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ದಾಖಲೆ ಗೆಲುವು ಸಾಧಿಸಿದೆ. ಎಡರಂಗ 35ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಕಣ್ಣೂರು ಧರ್ಮಡ ಕ್ಷೇತ್ರದಲ್ಲಿ ಭಾರೀ ಪ್ರಯಾಸದಿಂದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆಲುವು ಸಾಧಿಸಿದ್ದಾರೆ. 18437ಮತಗಳ ಅಂತರದಿಂದ ಇವರು ಗೆಲುವು ಸಾಧಿಸಿದ್ದಾರೆ. ಮೊದಲ ಆರು ಸುತ್ತಿನ ಮತ ಎಣಿಕೆಯಲ್ಲಿ ಹಿನ್ನಡೆ ಅನುಭವಿಸುತ್ತಾ ಬಂದಿದ್ದ ಪಿಣರಾಯಿ ವಿಜಯನ್ ನಂತರದ ಸುತ್ತುಗಳಲ್ಲಿ ಮುನ್ನಡೆ ಕಾಯ್ದುಕೊಂಡುಬಂದಿದ್ದರು.
2016ರಲ್ಲಿ ಬಿಜೆಪಿ ಗೆಲುವು ಸಾಧಿಸಿದ ನಂತರ 2021ರಲ್ಲಿ ಕಳೆದಕೊಂಡಿದ್ದ ನೇಮಂ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ಭರ್ಜರಿ ಗೆಲುವಿನ ಮೂಲಕ ಮತ್ತೆ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ನೇಮಂ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್, ಚಾತನ್ನೂರು ಕ್ಷೇತ್ರದಿಂದ ಬಿ.ಬಿ ಗೋಪಕುಮಾರ್ ಹಾಗೂ ಕಯಕ್ಕೂಟ್ಟಂ ಕ್ಷೇತ್ರದಿಂದ ಕೇಂದ್ರದ ಮಾಜಿ ಸಚಿವ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ವಿ. ಮುರಳೀಧರನ್ ಗೆಲುವು ಸಾಧಿಸಿದ್ದಾರೆ. 2016ರಲ್ಲಿ ನೇಮಂ ವಿಧಾನಸಭಾ ಕ್ಷೇತ್ರದಲ್ಲಿ ಕೇರಳದ ಚರಿತ್ರೆಯಲ್ಲಿ ಬಿಜೆಪಿ ಕೇಂದ್ರದ ಸಚಿವರಾಗಿದ್ದ ಓ.ರಾಜಗೋಪಾಲ್ ಅವರನ್ನು ಕಣಕ್ಕಿಳಿಸುವ ಮೂಲಕ ಭರ್ಜರಿ ಗೆಲುವು ಸಾಧಿಸಿತ್ತು.
ಯಾವುದೇ ಮಾತ್ರಕ್ಕೂ ಬಿಜೆಪಿಗೆ ಕೇರಳದಲ್ಲಿ ಖಾತೆ ತೆರೆಯಲು ಆಸ್ಪದ ನೀಡುವುದಿಲ್ಲ ಎಂದು ಆಡಳಿತಾರೂಢ ಎಡರಂಗ ಹಾಗೂ ಪ್ರತಿಪಕ್ಷ ಐಕ್ಯರಂಗದ ಮುಖಂಡರ ಶಪಥ ಸುಳ್ಳಾಗಿಸಿ ಬಿಜೆಪಿ ಇದೇ ಮೊದಲ ಬಾರಿಗೆ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. 2026ರಲ್ಲಿ ನಡೆದ ಚುನಾವಣೆಯನ್ನು 'ಆ್ಯಂಟಿ ಸಿಪಿಎಂ ಇಲೆಕ್ಷನ್' ಎಂದು ಬಿಜೆಪಿ ಬಣ್ಣಿಸಿದೆ.



