ಮಂಜೇಶ್ವರ: ಶ್ರೀವಿಷ್ಣು ಯಕ್ಷಬಳಗ ಮಜಿಬೈಲು ಮಂಜೇಶ್ವರ ಕಲಾ ತಂಡದ ಶ್ರೀ ವಿಷ್ಣು ಯಕ್ಷ ವೈಭವ 2026 ಕಾರ್ಯಕ್ರಮ ಮೇ. 17 ರಂದು ಕಡಂಬಾರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ವಠಾರದಲ್ಲಿ ಜರಗಲಿದೆ. ಬಯಲಾಟ, ಸಭಾ ಕಾರ್ಯಕ್ರಮ, ಸನ್ಮಾನ ಸಹಿತ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಕಡಂಬಾರು, ಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು, ಶ್ರೀ ಬೆನಕ ಯಕ್ಷಕಲಾ ವೇದಿಕೆ ಪೈವಳಿಕೆ ಸಮಾರಂಭಕ್ಕೆ ಸಹಕಾರ ನೀಡಲಿದೆ.
ಅಪರಾಹ್ನ 4.30ಕ್ಕೆ ದೀಪ ಪ್ರಜ್ವಲನೆ ಮೂಲಕ ಯಕ್ಷಶತಕ ಉದ್ಘಾಟನೆಗೊಳ್ಳಿದೆ. ಬಳಿಕ ತಂಡದ ಸದಸ್ಯರು ಹಾಗೂ ನುರಿತ ಕಲಾವಿದರಿಂದ ಗುರುದಕ್ಷಿಣೆ ಯಕ್ಷಗಾನ ನಡೆಯಲಿದೆ. ರಾತ್ರಿ 7 ರಿಂದ ಸಭಾಕಾರ್ಯಕ್ರಮ ಜರಗಲಿದೆ. ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಕಡಂಬಾರು ಕ್ಷೇತ್ರದ ಆಡಳಿತ ಮೊಕ್ತೇಸರ ಸೂರ್ಯನಾರಾಯಣಯ್ಯ ಅಧ್ಯಕ್ಷತೆ ವಹಿಸುವರು. ವೈದಿಕ ವಿದ್ವಾಂಸ ರಾಮದಾಸ ಆಚಾರ್ಯ ಕಡಂಬಾರು ಶುಭಾಶಂಸನೆಗೈಯ್ಯುವರು. ಮುಖ್ಯ ಅಭ್ಯಾಗತರಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು, ಉದ್ಯಮಿ ಅಜಯ್ ಪಿ ಶೆಟ್ಟಿ, ಕನಿಲ ಶ್ರೀ ಭಗವತಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪದ್ಮನಾಭ ಕಡಪ್ಪರ, ಪ್ರೀತೇಶ ಶೆಟ್ಟಿ ಉಪಸ್ಥಿತರಿರುವರು. ಕಲಾತಪಸ್ವಿ ಬಾಲಕೃಷ್ಣ ಮಂಜೇಶ್ವರ ನಾಟ್ಯನಿಲಯಂ ಮಂಜೇಶ್ವರ ಹಾಗೂ ರಾಜಾರಾಮ ರಾವ್ ಮೀಯಪದವು ಅವರನ್ನು ಗಣ್ಯರ ಸಮಕ್ಷಮ ಗೌರವಿಸಲಾಗುವುದು. ಬಳಿಕ ಯಕ್ಷಗಾನ ಬಯಲಾಟ ಭಾರ್ಗವ ವಿಜಯ ಜರಗಲಿದೆ ಎಂದು ಶ್ರೀ ವಿಷ್ಣು ಯಕ್ಷಬಳಗ ಪ್ರಕಟಣೆ ತಿಳಿಸಿದೆ.

