ಈ ಸಂಬಂಧ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಎರಡು ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಿದೆ. ಜು.1ರಿಂದ ದೇಶಾದ್ಯಂತ ವಿಬಿ-ಜಿ ರಾಮ್ ಜಿ ಜಾರಿಗೊಳ್ಳಲಿದೆ ಮತ್ತು ಸುಮಾರು ಎರಡು ದಶಕಗಳಷ್ಟು ಹಳೆಯದಾದ ಮನರೇಗಾ ಕಾನೂನು ಅಧಿಕೃತವಾಗಿ ರದ್ದಾಗಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪ್ರಸಕ್ತ ಮನರೇಗಾ ಅಡಿ ದುಡಿಯುತ್ತಿರುವ ಕಾರ್ಮಿಕರಿಗೆ ಪರಿವರ್ತನೆ ಹಂತದಲ್ಲಿ ಯಾವುದೇ ಅಡಚಣೆಯಿಲ್ಲದೆ ಕೆಲಸ ಮುಂದುವರಿಯಲಿದೆ. ಜೂನ್ 30ಕ್ಕೆ ಇದ್ದಂತೆ ನರೇಗಾದಡಿ ನಡೆಯುತ್ತಿರುವ ಕಾಮಗಾರಿಗಳನ್ನು ಹೊಸ ಚೌಕಟ್ಟಿಗೆ ವರ್ಗಾಯಿಸಲಾಗುತ್ತದೆ ಎಂದು ಸಚಿವಾಲಯವು ಅಧಿಸೂಚನೆಯಲ್ಲಿ ತಿಳಿಸಿದೆ.
ಅಸ್ತಿತ್ವದಲ್ಲಿರುವ ಇ-ಕೆವೈಸಿ ಆಗಿರುವ ನರೇಗಾ ಉದ್ಯೋಗ ಕಾರ್ಡ್ಗಳು ನೂತನ ಯೋಜನೆಯಡಿ ಹೊಸದಾಗಿ ಗ್ರಾಮೀಣ ರೋಜಗಾರ್ ಗ್ಯಾರಂಟಿ ಕಾರ್ಡ್ಗಳ ವಿತರಣೆಯವರೆಗೆ ಮಾನ್ಯವಾಗಿರುತ್ತವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇ-ಕೆವೈಸಿ ಬಾಕಿ ಇರುವ ಕಾರ್ಮಿಕರಿಗೆ ಉದ್ಯೋಗಕ್ಕೆ ಯಾವುದೇ ತೊಂದರೆಯಾಗುವುದಿಲ್ಲ,ಜೊತೆಗೆ ಉದ್ಯೋಗ ಕಾರ್ಡ್ ಇಲ್ಲದವರ ನೋಂದಣಿಯು ಗ್ರಾಮ್ ಪಂಚಾಯತ್ಗಳ ಮೂಲಕ ಮುಂದುವರಿಯಲಿದೆ ಎಂದು ಕೇಂದ್ರವು ತಿಳಿಸಿದೆ.
ವೇತನ ಪಾವತಿ, ಕುಂದುಕೊರತೆ ನಿವಾರಣೆ, ಹಂಚಿಕೆ ಕಾರ್ಯವಿಧಾನಗಳು ಮತ್ತು ಇತರ ಪರಿವರ್ತನೆ ಸಂಬಂಧಿತ ನಿಬಂಧನೆಗಳಿಗೆ ಸಂಬಂಧಿಸಿದ ವಿವರವಾದ ನಿಯಮಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮಾಲೋಚಿಸಿದ ಬಳಿಕ ಅಂತಿಮಗೊಳಿಸಲಾಗುತ್ತದೆ. ಸಾರ್ವಜನಿಕರಿಂದ ಮರುಮಾಹಿತಿಗಾಗಿ ಕರಡು ನಿಯಮಗಳನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಸಚಿವಾಲಯವು ತಿಳಿಸಿದೆ.
ಗ್ರಾಮೀಣಾಭಿವೃದ್ಧಿಯಲ್ಲಿ ಗ್ರಾಮಪಂಚಾಯತ್ಗಳು ಚಾಲಕ ಶಕ್ತಿಯಾಗಿವೆ ಎಂದು ಬಣ್ಣಿಸಿರುವ ಸರಕಾರವು,ಹೊಸ ಕಾಯ್ದೆಯು ಗ್ರಾಮಗಳ ಆರ್ಥಿಕತೆಯನ್ನು ಬಲಗೊಳಿಸಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸಲಿದೆ ಮತ್ತು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಹೇಳಿದೆ.

