ಸೋಮನಾಥ: 1998ರ ಪೋಖರಣ್ ಪರಮಾಣು ಪರೀಕ್ಷೆಗಳನ್ನು ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ, 'ಭಾರತವನ್ನು ತಲೆಬಾಗಿಸಲು ಅಥವಾ ಒತ್ತಡಕ್ಕೆ ಮಣಿಯುವಂತೆ ಮಾಡಲು ವಿಶ್ವದ ಯಾವುದೇ ಶಕ್ತಿಗೆ ಸಾಧ್ಯವಿಲ್ಲ' ಎಂದು ಪ್ರತಿಪಾದಿಸಿದರು.
ದೇವಸ್ಥಾನದ ಪುನರ್ ನಿರ್ಮಾಣದ ಅಮೃತ ಮಹೋತ್ಸವದ ಅಂಗವಾಗಿ ಸೋಮವಾರ ಇಲ್ಲಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, 'ಸೋಮನಾಥ ದೇವಸ್ಥಾನದ ಅಮೃತ ಮಹೋತ್ಸವ ಕೇವಲ ಭೂತಕಾಲದ ಸ್ಮರಣೆಯಲ್ಲ.
ಬದಲಾಗಿ ಮುಂದಿನ ಸಾವಿರ ವರ್ಷಗಳ ಕಾಲ ಭಾರತಕ್ಕೆ ಸ್ಫೂರ್ತಿಯ ಹಬ್ಬ' ಎಂದು ಒತ್ತಿ ಹೇಳಿದರು.
'ದೇಶದ ಪಾಲಿಗೆ ಮೇ 11 ಮಹತ್ವದ ದಿನ. ಸೋಮನಾಥ ದೇವಸ್ಥಾನದಲ್ಲಿ ಪವಿತ್ರ ಕಾರ್ಯ ನಡೆಯಿತು. ಮಾತ್ರವಲ್ಲದೇ, 1998ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಪರಮಾಣು ಪರೀಕ್ಷೆಗಳನ್ನು ನಡೆಸಲಾಯಿತು. ನಮ್ಮ ವಿಜ್ಞಾನಿಗಳು ಭಾರತದ ಸಾಮರ್ಥ್ಯವನ್ನು ಇಡೀ ಜಗತ್ತಿಗೆ ಪ್ರದರ್ಶಿಸಿದರು' ಎಂದು ಮೋದಿ ಹೇಳಿದರು.
'ಈ ಪರೀಕ್ಷೆಗಳು ಜಗತ್ತಿನಾದ್ಯಂತ ಆಘಾತದ ಅಲೆಗಳನ್ನು ಉಂಟು ಮಾಡಿದವು ಹಾಗೂ ಹಲವಾರು ದೇಶಗಳು ಕೋಪದಿಂದ ಪ್ರತಿಕ್ರಿಯಿಸಿದವು. ಈ ಪರೀಕ್ಷೆಗಳ ನಂತರ ಜಾಗತಿಕ ಶಕ್ತಿಗಳು ನಿರ್ಬಂಧಗಳು ಮತ್ತು ಆರ್ಥಿಕ ಒತ್ತಡದ ಮೂಲಕ ಭಾರತವನ್ನು ಏಕಾಂಗಿಯಾಗಿಸಲು ಪ್ರಯತ್ನಿಸಿದವು. ಆದರೆ, ಭಾರತವು ದೃಢವಾಗಿ ನಿಂತಿತು' ಎಂದು ಅವರು ತಿಳಿಸಿದರು.
'ಅಂತರರಾಷ್ಟ್ರೀಯ ಸಮುದಾಯದ ಹೆಚ್ಚುತ್ತಿರುವ ಒತ್ತಡದ ಹೊರತಾಗಿಯೂ, ಭಾರತವು ಮೇ 13ರಂದು ಇನ್ನೂ ಎರಡು ಪರಮಾಣು ಪರೀಕ್ಷೆಗಳನ್ನು ನಡೆಸಿತು. ರಾಜಕೀಯ ಇಚ್ಛಾಶಕ್ತಿ ಎಷ್ಟು ಅಚಲವಾಗಿದೆ ಎಂಬುದನ್ನು ಜಗತ್ತಿಗೆ ಭಾರತ ಪ್ರದರ್ಶಿಸಿತು. ಅಟಲ್ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರವು ನಮಗೆ ರಾಷ್ಟ್ರ ಮೊದಲು ಎಂದು ಸಾಬೀತುಪಡಿಸಿತು' ಎಂದರು.
'ಯಾವುದೇ ರಾಷ್ಟ್ರವು ತನ್ನ ಬೇರುಗಳೊಂದಿಗೆ ಸಂಪರ್ಕ ಹೊಂದಿಲ್ಲದಿದ್ದರೆ ಬಲವಾಗಿ ಉಳಿಯಲು ಸಾಧ್ಯವಿಲ್ಲ ಎಂಬುದನ್ನು ಸೋಮನಾಥ ನಮಗೆ ನೆನಪಿಸುತ್ತದೆ' ಎಂದು ಪ್ರಧಾನಿ ಹೇಳಿದರು.
'ವಿದೇಶಿ ಆಕ್ರಮಣಕಾರರು ಸೋಮನಾಥ ದೇವಾಲಯದ ವೈಭವ ಅಳಿಸಿಹಾಕಲು ಪ್ರಯತ್ನಿಸಿದರು. ಈ ದೇವಾಲಯವನ್ನು ಪದೇ ಪದೇ ಕೆಡವಿ ಹಾಕಿದರು. ಆದರೂ ಜನರು ಪುನರ್ ನಿರ್ಮಿಸಿ ಘನತೆಯನ್ನು ಎತ್ತಿ ಹಿಡಿದರು' ಎಂದು ಅವರು ನೆನಪಿಸಿಕೊಂಡರು.

