ನವದೆಹಲಿ: ದೆಹಲಿಯ ಈಶಾನ್ಯ ಭಾಗದಲ್ಲಿ 2020ರಲ್ಲಿ ನಡೆದ ಗಲಭೆಗಳಿಗೆ ಸಂಬಂಧಿಸಿದ ಪ್ರಕರಣದ ಆರೋಪಿ ಹಾಗೂ ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್, ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿಯ ನ್ಯಾಯಾಲಯವೊಂದು ಮಂಗಳವಾರ ವಜಾಗೊಳಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಾಜಪೇಯಿ ಅವರು ಅರ್ಜಿ ವಿಚಾರಣೆ ನಡೆಸಿದರು.
'ಸೋದರ ಸಂಬಂಧಿ ಮೃತಪಟ್ಟಿದ್ದು, 40 ದಿನ ನಡೆಸುವ ಧಾರ್ಮಿಕ ವಿಧಿಗಳಲ್ಲಿ ಪಾಲ್ಗೊಳ್ಳಬೇಕು. ತಾಯಿಯು ಕೂಡ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಆಕೆಯ ಆರೈಕೆ ಮಾಡಬೇಕಾಗಿರುವ ಕಾರಣ 15 ದಿನಗಳ ಮಧ್ಯಂತರ ಜಾಮೀನು ನೀಡಬೇಕು' ಎಂದು ಖಾಲಿದ್ ಅರ್ಜಿ ಸಲ್ಲಿಸಿದ್ದರು.
ಸಿಎಎ ಹಾಗೂ ಎನ್ಆರ್ಸಿ ವಿರೋಧಿ ಪ್ರತಿಭಟನೆಗಳ ವೇಳೆ ಭುಗಿಲೆದ್ದಿದ್ದ ಹಿಂಸಾಚಾರ, ಗಲಭೆಗೆ ಸಂಬಂಧಿಸಿ ಖಾಲಿದ್ ಹಾಗೂ ಇತರರ ವಿರುದ್ಧ ಯುಎಪಿಎ, ಐಪಿಸಿ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಾಗಿದೆ.
ಈ ಗಲಭೆಗಳಲ್ಲಿ 53 ಮಂದಿ ಮೃತಪಟ್ಟು, 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
'ಕಾರಣ ಸಮರ್ಥನೀಯವಲ್ಲ': ವಿಚಾರಣೆ ವೇಳೆ, 'ಜಾಮೀನಿಗಾಗಿ ನೀಡಿರುವ ಕಾರಣಗಳು ಸಮರ್ಥನೀಯವಲ್ಲ' ಎಂದು ನ್ಯಾಯಾಲಯವು ಜಾಮೀನು ಅರ್ಜಿ ವಜಾಗೊಳಿಸಿ ನೀಡಿರುವ ಆದೇಶದಲ್ಲಿ ತಿಳಿಸಿದೆ.
'ಅರ್ಜಿರನ ತೀರ ಹತ್ತಿರದ ಸಂಬಂಧಿ ನಿಧನದ ಹಿನ್ನೆಲೆಯಲ್ಲಿ ಧಾರ್ಮಿಕ ವಿಧಿ ನಡೆಯುತ್ತಿದ್ದಲ್ಲಿ, ಅರ್ಜಿಯನ್ನು ಪರಿಗಣಿಸಬಹುದಿತ್ತು. ಅಲ್ಲದೇ, ಮೃತವ್ಯಕ್ತಿ ಅಷ್ಟೊಂದು ಹತ್ತಿರದ ಸಂಬಂಧಿಯಾಗಿದ್ದಲ್ಲಿ ಅವರು ಸತ್ತ ಸಂದರ್ಭದಲ್ಲಿಯೇ ಅರ್ಜಿದಾರ ಜಾಮೀನು ಕೇಳುತ್ತಿದ್ದರು' ಎಂದೂ ನ್ಯಾಯಾಲಯ ಹೇಳಿದೆ.
ಇದಕ್ಕೂ ಮುನ್ನ, ಖಾಲಿದ್ ಜಾಮೀನು ಅರ್ಜಿ ವಿರೋಧಿಸಿದ ವಿಶೇಷ ಸರ್ಕಾರಿ ವಕೀಲ ಅನಿರುದ್ಧ ಮಿಶ್ರಾ, 'ಅರ್ಜಿದಾರನಿಗೆ ತಂದೆ ಹಾಗೂ ಐವರು ಸಹೋದರಿಯರು ಇದ್ದಾರೆ. ಶಸ್ತ್ರಚಿಕಿತ್ಸೆಗೂ ಮುನ್ನ ಹಾಗೂ ನಂತರ ಇವರೆಲ್ಲಾ ತಾಯಿಯ ಆರೈಕೆ ಮಾಡಬಲ್ಲರು' ಎಂದು ನ್ಯಾಯಾಲಯಕ್ಕೆ ತಿಳಿಸಿದರು.
'ಖಾಲಿದ್ ತಾಯಿಗೆ ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸೆ ನಡೆಸಲು ಉದ್ದೇಶಿಸಲಾಗಿದೆ. ಹೀಗಾಗಿ ತಾಯಿಯ ಆರೈಕೆಗಾಗಿ ಅರ್ಜಿದಾರ ಹೋಗುವ ಅವಶ್ಯಕತೆ ಇಲ್ಲ' ಎಂದೂ ಹೇಳಿದರು. ಈ ವಾದವನ್ನು ಪರಿಗಣಿಸಿದ ನ್ಯಾಯಾಲಯವು ಖಾಲಿದ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.

