ನವದೆಹಲಿ: ಕಾಂಗ್ರೆಸ್ ದೇಶದ ಜನರಲ್ಲಿ ವಿನಾಕಾರಣ ಭಯ ಹುಟ್ಟಿಸುವುದು ಮತ್ತು ಸರ್ಕಾರದ ಕೆಲಸಗಳಿಗೆ ಅಡ್ಡಿಪಡಿಸುವುದನ್ನು ನಿಲ್ಲಿಸಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ.
2014ರಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಮಾಜದ ಪ್ರತಿಯೊಂದು ವರ್ಗದ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ ಎಂದು ಅವರು ಪ್ರತಿಪಾದಿಸಿದರು.
ಈ ಕುರಿತು ತಮ್ಮ ಎಕ್ಸ್ನಲ್ಲಿ ಸರಣಿ ಪೋಸ್ಟ್ಗಳನ್ನು ಹಂಚಿಕೊಂಡಿರುವ ಅವರು, '2014ರಿಂದ ನಾವು ನಮ್ಮ ನೀತಿಗಳು ಮತ್ತು ಯೋಜನೆಗಳ ಮೂಲಕ ಸಮಾಜದ ಪ್ರತಿಯೊಂದು ಕ್ಷೇತ್ರ ಮತ್ತು ವರ್ಗಕ್ಕೆ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದೇವೆ. ನಮ್ಮ ಆಡಳಿತ ವ್ಯವಸ್ಥೆಯ ಕೇಂದ್ರಬಿಂದುವೇ ರೈತರು, ಬಡವರು, ಮಹಿಳೆಯರು, ಯುವಕರು ಮತ್ತು ಎಂಎಸ್ಎಂಇ ವಲಯವಾಗಿದೆ' ಎಂದು ಹೇಳಿದ್ದಾರೆ.
'ದೇಶದಲ್ಲಿ ತೆರೆಯಲಾದ 58 ಕೋಟಿ ಜನ್ ಧನ್ ಖಾತೆಗಳು, ವಿತರಿಸಲಾದ 57 ಕೋಟಿ ಮುದ್ರಾ ಸಾಲಗಳು ಮತ್ತು 1 ಕೋಟಿ ಸ್ವನಿಧಿ ಖಾತೆಗಳು ಅದಾನಿ ಅಥವಾ ಅಂಬಾನಿಗಾಗಿ ಮಾಡಿದ್ದೇ? ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ, ಪಿಎಂ ವಿಶ್ವಕರ್ಮ ಯೋಜನೆ, ಪಿಎಂ ಇಂಟರ್ನ್ಶಿಪ್ ಯೋಜನೆ ಮತ್ತು ಪಿಎಂ ಕಿಸಾನ್ ಸಮ್ಮಾನ್ ನಿಧಿಗಳು ಅದಾನಿ ಅಥವಾ ಅಂಬಾನಿ ಅವರಿಗಾಗಿ ರೂಪಿಸಲಾಗಿದೆಯೇ?' ಎಂದು ಪ್ರಶ್ನಿಸಿದ್ದಾರೆ. ಕಳೆದ ವರ್ಷ ಕೃಷಿ ಸಾಲ ವಿತರಣೆಯಲ್ಲಿ ಶೇ 15.7 ಮತ್ತು ಎಂಎಸ್ಎಂಇ ಸಾಲದಲ್ಲಿ ಶೇ 33ರಷ್ಟು ಪ್ರಗತಿಯಾಗಿದೆ ಎಂದು ಅವರು ಅಂಕಿ-ಅಂಶಗಳನ್ನು ನೀಡಿದ್ದಾರೆ.

