ಶಿರಡಿ : 'ಒಂದು ಕಾಲದಲ್ಲಿ ಶಸ್ತ್ರಾಸ್ತ್ರಗಳ ಆಮದುದಾರ ದೇಶ ಎಂದು ಪರಿಗಣಿತವಾಗಿದ್ದ ಭಾರತವು, ಮುಂದಿನ 25-30 ವರ್ಷಗಳಲ್ಲಿ ಅತಿ ದೊಡ್ಡ ಶಸ್ತ್ರಾಸ್ತ್ರಗಳ ರಫ್ತುದಾರ ದೇಶವಾಗುವುದನ್ನು ತಡೆಯಲು ಯಾವುದೇ ಶಕ್ತಿಯಿಂದ ಸಾಧ್ಯವಿಲ್ಲ' ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಶನಿವಾರ ಹೇಳಿದ್ದಾರೆ.
ಶಿರಡಿಯಲ್ಲಿ ನಿಬೆ ಸಂಸ್ಥೆಯ ಮದ್ದುಗುಂಡು ತಯಾರಿಕಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, 'ರಕ್ಷಣಾ ಉತ್ಪಾದನೆಯಲ್ಲಿ ಖಾಸಗಿ ವಲಯದ ಪಾಲು ಕೆಲವು ವರ್ಷಗಳವರೆಗೆ ಶೇ 25ರಿಂದ 30ರಷ್ಟಿತ್ತು. ಅದನ್ನು ಶೇ 50ಕ್ಕೆ ಹೆಚ್ಚಿಸುವುದು ನಮ್ಮ ಗುರಿ' ಎಂದಿದ್ದಾರೆ.
'ರಕ್ಷಣಾ ಕ್ಷೇತ್ರದಲ್ಲಿ ಖಾಸಗಿ ವಲಯವು ಕೇವಲ ನಟ್ ಮತ್ತು ಬೋಲ್ಟ್ಗಳ ಪೂರೈಕೆದಾರನಾಗಿ ಉಳಿದಿಲ್ಲ, ಬದಲಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳ ಉತ್ಪಾದಕ ಆಗಿದೆ. ಸರ್ಕಾರದ ದೂರದೃಷ್ಟಿ ಮತ್ತು ಖಾಸಗಿ ವಲಯದ ನಾವೀನ್ಯತೆಗಳು ಒಟ್ಟಿಗೆ ಸೇರಿದಾಗ ದೇಶವು ಹೊಸ ಎತ್ತರವನ್ನು ತಲುಪುತ್ತದೆ' ಎಂದು ಸಿಂಗ್ ತಿಳಿಸಿದ್ದಾರೆ.
'ಶಿರಡಿಯಲ್ಲಿ 200 ಎಕರೆಯಲ್ಲಿ ತಲೆಎತ್ತಿರುವ ಕಾರ್ಖಾನೆಯು ಫಿರಂಗಿ ಬಾಂಬ್ಗಳನ್ನು ತಯಾರಿಸಲಿದ್ದು, 2 ಸಾವಿರ ಮಂದಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗ ಒದಗಿಸಲಿದೆ. ಅಲ್ಲದೇ, ಸುತ್ತಲಿನ ಮಧ್ಯಮ, ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳಿಗೂ ನೆರವು ಒದಗಿಸಲಿದೆ. ಇಲ್ಲಿ ಉತ್ಪಾದನೆಯಾಗುವ ರಕ್ಷಣಾ ಉತ್ಪನ್ನಗಳನ್ನು ಹೊರದೇಶಗಳಿಗೂ ರಫ್ತು ಮಾಡಲಾಗುವುದು' ಎಂದು ನಿಬೆ ಗ್ರೂಪ್ನ ಮುಖ್ಯಸ್ಥ ಗಣೇಶ್ ನಿಬೆ ತಿಳಿಸಿದ್ದಾರೆ.
ಈ ವೇಳೆ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಜೊತೆಗಿದ್ದರು.

