ಭೋಪಾಲ್: ನಟಿ ಟ್ವಿಶಾ ಶರ್ಮಾ ಅವರ ಎರಡನೇ ಮರಣೋತ್ತರ ಪರೀಕ್ಷೆಯನ್ನು ದೆಹಲಿಯ ಏಮ್ಸ್ ವೈದ್ಯರು ಪೂರ್ಣಗೊಳಿಸಿದ ಬಳಿಕ ಭಾನುವಾರ ಅಂತ್ಯಕ್ರಿಯೆ ನಡೆಸಲಾಯಿತು.
ಇಲ್ಲಿನ ಭದ್ಭದಾ ವಿಶ್ರಾಮ ಘಾಟ್ನಲ್ಲಿ ಸಂಜೆ 5 ಗಂಟೆಗೆ ಅಂತ್ಯಕ್ರಿಯೆ ನಡೆಯಿತು. ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಚಿತೆಗೆ ಬೆಂಕಿ ಹಚ್ಚುವಾಗ ಟ್ವಿಶಾ ಅವರ ತಾಯಿ ಮತ್ತು ಕುಟುಂಬದ ಸದಸ್ಯರು ಕಣ್ಣೀರಿಟ್ಟರು.
'ಮಗಳು, ಸೋದರಿ, ಗೆಳತಿ ಹಾಗೂ ಮುಗ್ಧ ಜೀವಕ್ಕೆ ನಾವು ವಿದಾಯ ಹೇಳಿದ್ದೇವೆ. ಕನಸುಗಳೊಂದಿಗೆ ಜೀವನದ ಹೊಸ ಹಂತವನ್ನು ಆರಂಭಿಸಿದ್ದ ಮಗಳು ನಮ್ಮನ್ನೆಲ್ಲಾ ಬಹು ಬೇಗನೆ ಅಗಲಿದ್ದಾಳೆ. ಹೆತ್ತವರ ಕಣ್ಣುಗಳು, ನುಚ್ಚುನೂರಾದ ಕನಸುಗಳು ಮತ್ತು ನ್ಯಾಯಕ್ಕಾಗಿ ಕಾಯುತ್ತಾ ಕಳೆಯುತ್ತಿರುವ ಪ್ರತಿ ಕ್ಷಣ ಸಮಾಜದ ಮುಂದೆ ಮೌನ ಪ್ರಶ್ನೆಯನ್ನು ಎತ್ತುತ್ತಿವೆ' ಎಂದು ಟ್ವಿಶಾ ಅವರ ತಂದೆ ನವನಿಧಿ ಶರ್ಮಾ ಹೇಳಿದ್ದಾರೆ.
ಭೋಪಾಲ್ನ ಕತಾರ ಹಿಲ್ಸ್ ಪ್ರದೇಶದಲ್ಲಿರುವ ಮನೆಯಲ್ಲಿ ಟ್ವಿಶಾ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಮೇ 12ರಂದು ಪತ್ತೆಯಾಗಿತ್ತು.
ಪತಿ ಸಮರ್ಥ್ ಸಿಂಗ್ ಮತ್ತು ಅತ್ತೆ, ನಿವೃತ್ತ ನ್ಯಾಯಾಧೀಶರಾದ ಗಿರಿಬಾಲಾ ಸಿಂಗ್ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ಕತಾರ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು.
ಹತ್ತು ದಿನಗಳವರೆಗೆ ತಲೆಮರೆಸಿಕೊಂಡಿದ್ದ ಸಮರ್ಥ್ ಸಿಂಗ್ ಅವರನ್ನು ಶುಕ್ರವಾರ ಜಬಲಪುರದಲ್ಲಿ ಬಂಧಿಸಲಾಗಿತ್ತು. ಭೋಪಾಲ್ ನ್ಯಾಯಾಲಯವು ಸಮರ್ಥ್ ಅವರನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿ ಶನಿವಾರ ಆದೇಶಿಸಿತ್ತು.
ಭೋಪಾಲ್ನ ಭದ್ಭದಾ ವಿಶ್ರಾಮ ಘಾಟ್ನಲ್ಲಿ ಭಾನುವಾರ ಟ್ವಿಶಾ ಶರ್ಮಾ ಅವರ ಅಂತ್ಯಕ್ರಿಯೆ ವೇಳೆ ತಾಯಿ ರೇಖಾ ಶರ್ಮಾ ಕಣ್ಣೀರಿಟ್ಟರು -ಪಿಟಿಐ ಚಿತ್ರ'ವರದಿ ಸಿದ್ಧಪಡಿಸಲು ಸಮಯ ಬೇಕು'
'ಟ್ವಿಶಾ ಶರ್ಮಾ ಅವರ ಎರಡನೇ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ. ಅಂಗಾಂಶ ಪರೀಕ್ಷೆ ಮತ್ತು ಒಳಾಂಗಗಳ ಪರೀಕ್ಷೆ ಸೇರಿದಂತೆ ಕೆಲ ಪ್ರಯೋಗಾಲಯ ಪರೀಕ್ಷೆಗಳ ಅಗತ್ಯ ಇರುವುದರಿಂದ ವರದಿ ಸಿದ್ಧಪಡಿಸಲು ಸ್ವಲ್ಪ ಸಮಯ ಹಿಡಿಯುತ್ತದೆ' ಎಂದು ದೆಹಲಿಯ ಏಮ್ಸ್ನ ವಿಧಿವಿಜ್ಞಾನ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಸುಧೀರ್ ಗುಪ್ತಾ ತಿಳಿಸಿದ್ದಾರೆ.

