ಅಗರ್ತಲಾ: ಇಂಧನ ಉಳಿತಾಯ ಮತ್ತು ಮಿತವ್ಯಯಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ತ್ರಿಪುರಾ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಶೇ 50ರಷ್ಟು ಸಿ ಮತ್ತು ಡಿ ದರ್ಜೆಯ ನೌಕರರು ಇಂದಿನಿಂದಲೇ ಮನೆಯಿಂದಲೇ ಕೆಲಸ ಮಾಡುಬೇಕು ಎಂದು ಬುಧವಾರ (ಮೇ.13) ಅಧಿಕೃತ ಆದೇಶ ಹೊರಡಿಸಿದೆ.
ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಪೆಟ್ರೋಲ್-ಡೀಸೆಲ್ ಬಳಕೆ ಕಡಿಮೆ ಮಾಡುವಂತೆ, ಸಾರ್ವಜನಿಕ ಸಾರಿಗೆ ಬಳಸುವಂತೆ ಮತ್ತು ವರ್ಕ್ ಫ್ರಮ್ ಹೋಮ್ ಮಾಡುವಂತೆ ಜನರಿಗೆ ಕರೆ ನೀಡಿದ್ದರು. ಆ ಬೆನ್ನಲ್ಲೇ ತ್ರಿಪುರಾ ಸರ್ಕಾರ ಈ ಕ್ರಮ ಕೈಗೊಂಡಿದೆ.
ಸಾಮಾನ್ಯ ಆಡಳಿತ ಇಲಾಖೆಯ ವಿಶೇಷ ಕಾರ್ಯದರ್ಶಿ ಎ.ಕೆ. ಭಟ್ಟಾಚಾರ್ಜಿ ಅವರು ಹೊರಡಿಸಿರುವ ಪತ್ರದ ಪ್ರಕಾರ, 'ಇಲಾಖೆಯ ಮುಖ್ಯಸ್ಥರು ಪ್ರತಿ ದಿನ ಶೇ 50ರಷ್ಟು ನೌಕರರು ಮಾತ್ರ ಕಚೇರಿಗೆ ಹಾಜರಾಗುವುದನ್ನು ಖಚಿತಪಡಿಸಿಕೊಳ್ಳಬೇಕು. ಉಳಿದ ಶೇ 50ರಷ್ಟು ನೌಕರರಿಗೆ ಮನೆಯಿಂದ ಕೆಲಸ ಮಾಡಲು ಸೂಚಿಸಬೇಕು' ಎಂದು ತಿಳಿಸಲಾಗಿದೆ.
'ಎಲ್ಲಾ ಇಲಾಖೆಯ ಮುಖ್ಯಸ್ಥರು ಸಿ ಮತ್ತು ಡಿ ದರ್ಜೆಯ ಸಿಬ್ಬಂದಿಗೆ ವಾರದ ಪಾಳಿಯನ್ನು ಸಿದ್ಧಪಡಿಸಬೇಕು. ನೌಕರರು ಪರ್ಯಾಯ ವಾರಗಳಲ್ಲಿ ಕಚೇರಿಗೆ ಹಾಜರಾಗುವಂತೆ ಕ್ರಮ ಕೈಗೊಳ್ಳಬೇಕು. ಮೊದಲ ವಾರದ ಪಟ್ಟಿಯನ್ನು ಸಿದ್ಧಪಡಿಸುವಾಗ ಕಚೇರಿಯ ಸಮೀಪದಲ್ಲಿ ವಾಸಿಸುವ ನೌಕರರಿಗೆ ಆದ್ಯತೆ ನೀಡಬೇಕು' ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಮನೆಯಿಂದ ಕೆಲಸ ಮಾಡುವ ನೌಕರರು ದೂರವಾಣಿ ಮತ್ತು ಇತರ ಎಲೆಕ್ಟ್ರಾನಿಕ್ ಸಂಪರ್ಕ ಸಾಧನಗಳ ಮೂಲಕ ಸದಾ ಲಭ್ಯವಿರಬೇಕು. ತುರ್ತು ಕೆಲಸಗಳಿದ್ದಲ್ಲಿ ಅಂತಹ ನೌಕರರು ಕಚೇರಿಗೆ ಹಾಜರಾಗುವುದು ಕಡ್ಡಾಯವಾಗಿದೆ. ಇದೇ ರೀತಿಯ ಸೂಚನೆಗಳನ್ನು ಸಾರ್ವಜನಿಕ ವಲಯದ ಉದ್ದಿಮೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ಸ್ವಾಯತ್ತ ಸಂಸ್ಥೆಗಳಿಗೂ ಅನ್ವಯಿಸುವಂತೆ ಹೊರಡಿಸಲಾಗಿದೆ.
ಈ ನಿಯಮ ತುರ್ತು ಮತ್ತು ಅಗತ್ಯ ಸೇವೆಗಳಲ್ಲಿ ತೊಡಗಿರುವ ಕಚೇರಿಗಳು ಮತ್ತು ನೌಕರರಿಗೆ ಅನ್ವಯಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಪ್ರಸ್ತುತ ತ್ರಿಪುರಾದಲ್ಲಿ ಸುಮಾರು ಒಂದು ಲಕ್ಷ ಸರ್ಕಾರಿ ನೌಕರರಿದ್ದು, ಈ ಪೈಕಿ ಬಹುಪಾಲು ನೌಕರರು ಸಿ ಮತ್ತು ಡಿ ಗುಂಪಿಗೆ ಸೇರಿದ್ದಾರೆ. ಮುಂದಿನ ಆದೇಶದವರೆಗೆ ಈ ನಿಯಮ ಜಾರಿಯಲ್ಲಿರಲಿದೆ.

