ನವದೆಹಲಿ: ಶನಿವಾರ ವರ್ಚುವಲ್ ಆಗಿ ಆಯೋಜಿಸಲಾಗಿದ್ದ 'ಉದ್ಯೋಗ ಮೇಳ'ದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯುವ ಜನರಿಗೆ ಕೇಂದ್ರ ಸರಕಾರಿ ಉದ್ಯೋಗಗಳಿಗಾಗಿ 51,000ಕ್ಕೂ ಅಧಿಕ ನೇಮಕಾತಿ ಪತ್ರಗಳನ್ನು ವಿತರಿಸಿದರು.
ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ''ಇಂದು ದೇಶಾದ್ಯಂತದ ಸಾವಿರಾರು ಯುವಜನರಿಗೆ ಅತ್ಯಂತ ಪ್ರಮುಖ ದಿನವಾಗಿದೆ.
ಇಂದು 51,000ಕ್ಕೂ ಅಧಿಕ ಯುವಜನರು ಸರಕಾರಿ ಉದ್ಯೋಗಳಿಗೆ ನೇಮಕಾತಿ ಪತ್ರಗಳನ್ನು ಸ್ವೀಕರಿಸಿದ್ದಾರೆ'' ಎಂದರು.
ಇಂದು ನೇಮಕಗೊಂಡ ಎಲ್ಲಾ ಯುವಜನರು ದೇಶದ ಅಭಿವೃದ್ಧಿಯ ಪಯಣದಲ್ಲಿ ಪ್ರಮುಖ ಪಾಲುದಾರರಾಗುತ್ತಿದ್ದಾರೆ. ರೈಲ್ವೆ, ಬ್ಯಾಂಕಿಂಗ್, ರಕ್ಷಣೆ, ಆರೋಗ್ಯ, ಶಿಕ್ಷಣ ಮತ್ತು ಇತರ ಹಲವು ವಲಯಗಳಲ್ಲಿ ಎಲ್ಲಾ ಯುವಜನರು ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿದ್ದಾರೆ ಎಂದು ಅವರು ಹೇಳಿದರು.
''ಮುಂದಿನ ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಈಡೇರಿಸುವಲ್ಲಿ ನೀವೆಲ್ಲರೂ ಪ್ರಮುಖ ಪಾತ್ರ ವಹಿಸಲಿದ್ದೀರಿ. ಈ ಸಾಧನೆಗಾಗಿ ನಾನು ನಿಮ್ಮನ್ನು ಹಾಗೂ ನಿಮ್ಮ ಕುಟುಂಬದ ಸದಸ್ಯರನ್ನು ಅತ್ಯಂತ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ'' ಎಂದು ಅವರು ತಿಳಿಸಿದರು.
'ವಿಕಸಿತ್ ಭಾರತ್' ಕಡೆಗಿನ ಪಯಣವನ್ನು ವೇಗಗೊಳಿಸುವಲ್ಲಿ ಭಾರತದ ಯುವಜನರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಉದ್ಯೋಗ ಮೇಳ ನಮ್ಮ ಸರಕಾರವು ಹೊಸ ಅವಕಾಶಗಳೊಂದಿಗೆ ಯುವಶಕ್ತಿಯನ್ನು ಸಶಕ್ತೀಕರಣಗೊಳಿಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ'' ಎಂದು ಅವರು ಹೇಳಿದರು.
ಭಾರತದ ಯುವಕರು ಮತ್ತು ತಾಂತ್ರಿಕ ಪ್ರಗತಿಯ ಬಗ್ಗೆ ಜಗತ್ತು ತುಂಬಾ ಉತ್ಸುಕವಾಗಿದೆ. ಇಂದು ಜಗತ್ತು ಭಾರತದ ಅಭಿವೃದ್ಧಿಯ ಪಯಣದ ಭಾಗವಾಗಲು ಬಯಸುತ್ತದೆ ಎಂದು ಅವರು ತಿಳಿಸಿದರು.
'ಉದ್ಯೋಗ ಮೇಳ' ಪ್ರಾರಂಭವಾದಂದಿನಿಂದ ದೇಶಾದ್ಯಂತ ಇಂತಹ 18 ಕಾರ್ಯಕ್ರಮಗಳ ಮೂಲಕ ಸುಮಾರು 12 ಲಕ್ಷ ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ.
ಶನಿವಾರ ದೇಶಾದ್ಯಂತ 47 ಸ್ಥಳಗಳಲ್ಲಿ 'ಉದ್ಯೋಗ ಮೇಳ' ಆಯೋಜಿಸಲಾಗಿತ್ತು.

