ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಮುನ್ನವೇ ಚುನಾವಣಾ ಆಯೋಗ ಚುನಾವಣೋತ್ತರ ಹಿಂಸಾಚಾರವನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದ್ದು, ಸುಮಾರು 70 ಸಾವಿರ ಕೇಂದ್ರೀಯ ಪಡೆ ಯೋಧರನ್ನು ರಾಜ್ಯದಲ್ಲೇ ಉಳಿಸಿಕೊಂಡಿದೆ.
ಚುನಾವಣೋತ್ತರ ಹಿಂಸಾಚಾರ ಸಂಭವಿಸಿದ ತಾಣಗಳ ಮೇಲೆ ಸಿಎಪಿಎಫ್ ಸಿಬ್ಬಂದಿ ಹದ್ದಿನ ಕಣ್ಣು ಇರಿಸಿದ್ದಾರೆ.
2021ರ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ನಡೆದ ಹಿಂಸಾಚಾರವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯದ ಪೊಲೀಸ್ ಮಹಾನಿರ್ದೇಶಕರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತನಿಖಾ ತಂಡಕ್ಕೆ ಸಲ್ಲಿಸಿದ ವರದಿಯ ಪ್ರಕಾರ, ಚುನಾವಣಾ ಫಲಿತಾಂಶದ ಬಳಿಕ 1974 ಹಿಂಸಾಕೃತ್ಯಗಳು ವರದಿಯಾಗಿದ್ದವು. ಇದರಲ್ಲಿ ಹತ್ಯೆ, ಲೈಂಗಿಕ ದೌರ್ಜನ್ಯ, ದೊಂಬಿ ಮತ್ತು ಗಂಭೀರ ಗಾಯದಂತಹ ಪ್ರಕರಣಗಳು ಸೇರಿವೆ.
ಈ ಬಾರಿ ಪರಿಸ್ಥಿತಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ಕೇಂದ್ರ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಮೇ 4ರಂದು ಮತಗಳ ಎಣಿಕೆ ನಡೆಯುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. 2021ರ ಚುನಾವಣೆ ಬಳಿಕ ಹೆಚ್ಚು ಹಿಂಸಾಕೃತ್ಯಗಳು ಸಂಭವಿಸಿದ ಸ್ಥಳಗಳ ಮೇಲೆ ನಿಗಾ ಇರಿಸಲಾಗಿದೆ. ಚುನಾವಣೋತ್ತರ ಹಿಂಸಾಚಾರದಲ್ಲಿ 29 ಮಂದಿ ಹತ್ಯೆಗೀಡಾಗಿದ್ದರು. 12 ಲೈಂಗಿಕ ದೌರ್ಜನ್ಯ ಪ್ರಕರಣಗಳು, 391 ತೀವ್ರ ಗಾಯದ ಪ್ರಕರಣಗಳು, 940 ದೊಂಬಿ ಹಾಗೂ ಗದ್ದಲ ಪ್ರಕರಣಗಳು ಮತ್ತು 562 ದಾಳಿ ಪ್ರಕರಣಗಳು ವರದಿಯಾಗಿದ್ದವು. ಒಟ್ಟು 9304 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, 1345 ಮಂದಿಯನ್ನು ಬಂಧಿಸಲಾಗಿತ್ತು. ಶೇಕಡ 60ರಷ್ಟು ಪ್ರಕರಣಗಳಲ್ಲಿ ಎಫ್ಐಆರ್ ದಾಖಲಿಸಿಲ್ಲ ಎಂಬುದು ಮಾನವ ಹಕ್ಕುಗಳ ಆಯೋಗದ ತನಿಖೆಯಿಂದ ತಿಳಿದುಬಂದಿತ್ತು.

