ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಬಳಿಕ ಉಂಟಾಗಿರುವ ರಾಜಕೀಯ ಅಸ್ಥಿರತೆಯ ನಡುವೆ, ಎಐಎಡಿಎಂಕೆ ಮಹಾಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿಯಾಗಲಿದ್ದಾರೆ ಎಂಬ ವರದಿಗಳನ್ನು ಪಕ್ಷದ ಹಿರಿಯ ನಾಯಕ ಎಸ್. ಸೆಮ್ಮಳೈ ಗುರುವಾರ ತಳ್ಳಿಹಾಕಿದ್ದಾರೆ.
ಟಿವಿಕೆ ಪಕ್ಷಕ್ಕೆ ಬೆಂಬಲ ನೀಡುವ ಮೂಲಕ ರಾಜ್ಯದಲ್ಲಿ ಸರಕಾರ ರಚಿಸುವ ಸಾಧ್ಯತೆ ಕುರಿತು ಚರ್ಚಿಸಲು ಪಳನಿಸ್ವಾಮಿ ರಾಜ್ಯಪಾಲರನ್ನು ಭೇಟಿಯಾಗುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿದ್ದವು. 234 ಸದಸ್ಯಬಲದ ತಮಿಳುನಾಡು ವಿಧಾನಸಭೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದಿದೆ. ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದೆ. ಹೀಗಾಗಿ, ಪಕ್ಷವು 10 ಸ್ಥಾನಗಳ ಕೊರತೆಯನ್ನು ಎದುರಿಸುತ್ತಿದೆ. ಐದು ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್, ಸರಕಾರ ರಚನೆಗೆ ಟಿವಿಕೆಗೆ ಬೆಂಬಲ ಘೋಷಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸೆಮ್ಮಳೈ, ವರದಿಗಳನ್ನು ನಿರಾಕರಿಸಿ, ''ಅಂಥ ಅಗತ್ಯವಿಲ್ಲ'' ಎಂದರು. ''ಸರಕಾರ ಸ್ಥಾಪನೆಗೆ ಬೆಂಬಲ ಕೋರಿ ಯಾವುದೇ ಮೌಖಿಕ ಅಥವಾ ಲಿಖಿತ ಆಹ್ವಾನ ಟಿವಿಕೆಯಿಂದ ಎಐಎಡಿಎಂಕೆಗೆ ಬಂದಿಲ್ಲ'' ಎಂದು ಮಾಜಿ ಸಚಿವರೂ ಆಗಿರುವ ಸೆಮ್ಮಳೈ ತಿಳಿಸಿದರು.
ಟಿವಿಕೆ ಕೋರಿದರೆ, ಸರಕಾರ ರಚನೆಗೆ ಎಐಎಡಿಎಂಕೆ ಬೆಂಬಲ ನೀಡುವುದೇ ಎಂಬ ಪ್ರಶ್ನೆಗೆ, ಈ ಕುರಿತ ನಿರ್ಧಾರವನ್ನು ಪಳನಿಸ್ವಾಮಿ ತೆಗೆದುಕೊಳ್ಳಲಿದ್ದಾರೆ ಎಂದು ಅವರು ಹೇಳಿದರು.
''ನಮ್ಮ ನಾಯಕ ನಿರ್ಧರಿಸುತ್ತಾರೆ. ಅವರು ಕಿಂಗ್ಮೇಕರ್ ಅಲ್ಲ. ಅವರು ಕಿಂಗ್'' ಎಂದರು.

