ಶ್ರೀನಗರ: 'ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಸರಣಿ ಹಿಂಸಾಚಾರವನ್ನು ಕೊನೆಗೊಳಿಸಬೇಕು' ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಪಾಕಿಸ್ತಾನಕ್ಕೆ ತಿಳಿಸಿದ್ದಾರೆ.
'ಕಣಿವೆ ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆಗಳಲ್ಲೂ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.
ಹೀಗಿದ್ದರೂ, ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗ ಎಂದು ಒಪ್ಪಿಕೊಳ್ಳಲು ನಿರಾಕರಿಸಿರುವ ಪಾಕಿಸ್ತಾನ, ಸರಣಿ ಹಿಂಸಾಚಾರಕ್ಕೆ ಪ್ರೋತ್ಸಾಹ ನೀಡುತ್ತಿದೆ' ಎಂದು ಆರೋಪಿಸಿದ್ದಾರೆ.
'ನನ್ನ ವಿನಮ್ರ ಸಲಹೆಯೆಂದರೆ, ಭಾರತ ಹಾಗೂ ಪಾಕಿಸ್ತಾನ ಹಿಂಸಾಚಾರವನ್ನು ಬದಿಗಿಟ್ಟು, ಶಾಂತಿಯಿಂದ ಬದುಕುವ ಮಾರ್ಗವನ್ನು ಕಂಡುಕೊಳ್ಳಬೇಕು. ನಾವು ಪರಸ್ಪರ ಗೌರವ ಹಾಗೂ ಘನತೆಯಿಂದ ಬದುಕಬೇಕು' ಎಂದು ಸಲಹೆ ನೀಡಿದ್ದಾರೆ.
'ಪಹಲ್ಗಾಮ್ನಲ್ಲಿ ಭಯೋತ್ಪಾದಕರ ದಾಳಿ ಉಲ್ಲೇಖಿಸಿದ ಅವರು, 'ಈ ನೆಲದಲ್ಲಿ ಸಹೋದರತ್ವವನ್ನು ಪುನರುಜ್ಜೀವನಗೊಳಿಸುವ ಸಂದರ್ಭದಲ್ಲಿ ಉಗ್ರರ ದಾಳಿಯು ಬಹುದೊಡ್ಡ ಹೊಡೆತವಾಗಿದೆ. ಆದಾಗ್ಯೂ, ರಾಜ್ಯದ ಜನರು ಬೀದಿಗಿಳಿದು ಪ್ರತಿಭಟಿಸಿದರು. ಆ ಮೂಲಕ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಯನ್ನು ತಿರಸ್ಕರಿಸಿರುವುದು ಸ್ಪಷ್ಟವಾದ ಸೂಚನೆಯಾಗಿದೆ. ದಾಳಿಯಿಂದ ಪ್ರಾಣ ಕಳೆದುಕೊಂಡ ಕುಟುಂಬಸ್ಥರು ಮಾತ್ರ ನೋವು ಅನುಭವಿಸಿಲ್ಲ. ರಾಜ್ಯದ ಜನರೂ ದುಃಖಿತರಾಗಿದ್ದಾರೆ' ಎಂದು ಅಬ್ದುಲ್ಲಾ ಹೇಳಿದ್ದಾರೆ.
'ದಾಳಿಯ ಬಳಿಕ ಕಣಿವೆ ಭಾಗದ ಜನರು ಬೀದಿಗಿಳಿದು ಪ್ರತಿಭಟಿಸಿದರು. ಆ ಮೂಲಕ ಪಾಕಿಸ್ತಾನ ಪ್ರೇರಿತ ಹಿಂಸೆಯೂ ಕೊನೆಯಾಗಬೇಕು ಎಂದು ಜಗತ್ತಿಗೆ ಕಠಿಣ ಸಂದೇಶ ರವಾನಿಸಿದರು' ಎಂದು ಹೇಳಿದ್ದಾರೆ.

