ಬೆಂಗಳೂರು: ಕರ್ನಾಟಕ ಕಂಡ ಅತಿ ದೀರ್ಘಾವಧಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹೈಕಮಾಂಡ್ ಆಶಯದಂತೆ ಇಂದು ತಮ್ಮ ಹುದ್ದೆಗ ರಾಜೀನಾಮೆ ಸಲ್ಲಿಸಿ ಹೊರನಡೆದಿದ್ದಾರೆ.
ಈ ಮೂಲಕ ಕರ್ನಾಟಕ ಅಷ್ಟೇ ಅಲ್ಲದೇ ಇಡೀ ಭಾರತದಲ್ಲಿಯೇ ಹಿಂದುಳಿದ ವರ್ಗಗಳ ಒಬ್ಬ ಮೇರು ನಾಯಕನ ಒಂದು ಸಕ್ರಿಯ ರಾಜಕಾರಣದ ಅಧ್ಯಾಯ ಅಂತ್ಯವಾದಂತಾಗಿದೆ.
ವಿಶೇಷ ಎಂದರೆ ದೇಶದಲ್ಲಿ ಕಳೆದ ಒಂದೆರಡು ತಿಂಗಳಲ್ಲಿ ಹಿರಿಯ ಹಾಗೂ ಆಡಳಿತದಲ್ಲಿ ನಿಷ್ಣಾತೆಯನ್ನು ಸಾಧಿಸಿದ್ದ ಐವರು ಮುಖ್ಯಮಂತ್ರಿಗಳು ಕುರ್ಚಿಯಿಂದ ನಿರ್ಗಮಿಸಿದ್ದಾರೆ.
ಬಿಹಾರ ಅಷ್ಟೇ ಅಲ್ಲದೇ ದೇಶದ ಪ್ರಮುಖ ರಾಜಕೀಯ ನಾಯಕರಾದ ಹಾಗೂ ಸುದೀರ್ಘಾವಧಿಗೆ ಸಿಎಂ ಆಗಿದ್ದ ನಿತೀಶ್ ಕುಮಾರ್ ಅವರು ಇತ್ತೀಚೆಗೆ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸದ್ಯ ಅವರು ರಾಜ್ಯಸಭೆ ಸದಸ್ಯರಾಗಿ ಸಿಎಂ ಕುರ್ಚಿಯಿಂದ ದೂರ ಸರಿದಿದ್ದಾರೆ.
ಕಳೆದ ಚುನಾವಣೆಗಳಲ್ಲಿನ ಸೋಲಿನಿಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ, ಕೇರಳ ಸಿಎಂ ಆಗಿದ್ದ ಪಿಣರಾಯಿ ವಿಜಯನ್, ತಮಿಳುನಾಡು ಸಿಎಂ ಆಗಿದ್ದ ಎಂ.ಕೆ. ಸ್ಟಾಲಿನ್ ಅವರೂ ಸಿಎಂ ಕುರ್ಚಿ ಕಳೆದುಕೊಂಡಿದ್ದಾರೆ.
ಕೆಲವೇ ತಿಂಗಳುಗಳಲ್ಲಿ ದೇಶದ ಶಕ್ತಿಶಾಲಿ ಸಿಎಂಗಳು ಎನಿಸಿಕೊಂಡಿದ್ದ ಈ ಐವರೂ ನಾಯಕರು ಸಿಎಂ ಕುರ್ಚಿಯಿಂದ ಕೆಳಗಿಳಿದಿದ್ದು ಪ್ರಜಾಪ್ರಭುತ್ವದಲ್ಲಿ ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

