ಕಾಸರಗೋಡು: ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ಸಚಿವರು ಪ್ರಮಾಣ ವಚನ ಸ್ವೀಕರಿಸಿದರೆ, ಕಾಸರಗೋಡು ಜಿಲ್ಲೆಗೆ ಸಚಿವ ಪದವಿ ನೀಡದೆ, ಜಿಲ್ಲೆಯ ಪಾಲಿಗೆ ನಿರಾಶೆ ತಂದೊಡ್ಡಿರುವುದಾಘಿ ಬಿಜೆಪಿ ಕಾಸರಗೋಡು ಜಿಲ್ಲಾಧಯಕ್ಷೆ ಎಂ.ಎಲ್ ಅಶ್ವಿನಿ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದಲ್ಲೇ ಅತ್ಯಂತ ಹಿಂದುಳಿದಿರುವ ಜಿಲ್ಲೆಗೆ ಐಕ್ಯರಂಗ ಸರ್ಕಾರದಲ್ಲಿ ಮತ್ತೊಮ್ಮೆ ಪ್ರಾತಿನಿಧ್ಯ ನಿರಾಕರಿಸುವ ಮೂಲಕ, ಮುಂದಿನ ಐದು ವರ್ಷಗಳ ಕಾಲ ಜಿಲ್ಲೆಯ ಬಗ್ಗೆ ವಿ ಡಿ ಸತೀಶನ್ ಅವರ ಸರ್ಕಾರದ ಧೋರಣೆ ಏನು ಎಂಬುದು ಸಾಬೀತಾಗಿದೆ. ಸಚಿವರನ್ನು ಆಯ್ಕೆ ಮಾಡುವುದು ಐಕ್ಯರಂಗದ ಆಂತರಿಕ ವಿಷಯವಾಗಿದ್ದರೂ, ಜಿಲ್ಲೆಯ ಅಭಿವೃದ್ಧಿ ಹಾಗೂ ಸಮಸ್ಯೆಗಳನ್ನು ಸಚಿವ ಸಂಪುಟದಲ್ಲಿ ಬಲವಾಗಿ ಮಂಡಿಸಲು ಒಬ್ಬ ಸಚಿವ ಸ್ಥಾನ ಅನಿವಾರ್ಯ ಎಂಬುದು ಜಿಲ್ಲೆಯ ಪ್ರತಿಯೊಬ್ಬ ನಾಗರಿಕನ ಆಶಯವಾಗಿತ್ತು. ಹಲವು ದಶಕಗಳ ಬಳಿಕ ಕಾಸರಗೋಡು ಜಿಲ್ಲೆಯಿಂದ ಕಾಂಗ್ರೆಸ್ ಶಾಸಕರು ರಾಜ್ಯ ವಿಧಾನಸಭೆಯನ್ನು ಪ್ರವೇಶಿಸಿದ್ದು, ಈ ವಿಷಯವನ್ನಾದರೂ ಕಾಂಗ್ರೆಸ್ ನಾಯಕತ್ವ ಗಣನೆಗೆತೆಗೆದುಕೊಳ್ಳದೆ ಜಿಲ್ಲೆಯ ಜನತೆಯನ್ನು ವಂಚಿಸಿದೆ.
ವೆಂಟಿಲೇಟರ್ ಸ್ಥಿತಿಯಲ್ಲಿರುವ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜು ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಇನ್ನು ಮುಂದೆಯೂ ಅಗತ್ಯ ನಿಧಿ ಮತ್ತು ಬೆಂಬಲ ಸಿಗಬೇಕಾದ ಅನಿವಾರ್ಯತೆಯಿದೆ. ಐಕ್ಯರಂಗದ ಧೋರಣೆಯಿಂದ ಕಾಸರಗೋಡು ಜಿಲ್ಲೆ ಮತ್ತೊಮ್ಮೆ ನಿರ್ಲಕ್ಷ್ಯಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂಬ ಆತಂಕ ಜಿಲ್ಲೆಯ ಜನತೆಯನ್ನು ಕಾಡುತ್ತಿದೆ ಎಂದು ಅಶ್ವಿನಿ ತಿಳಿಸಿದ್ದಾರೆ.

