ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಜನಪ್ರಿಯತೆ ಹೆಚ್ಚುತ್ತಿರುವ ಮಧ್ಯೆ, ಭಾರತೀಯ ಯುವ ಕಾಂಗ್ರೆಸ್ (ಐವೈಸಿ) 'ಇಂಡಿಯನ್ ಯೂತ್ ಕಾಕ್ರೋಚ್' (ಭಾರತೀಯ ಯುವ ಜಿರಳೆಗಳು) ಎಂಬ ಅಭಿಯಾನವನ್ನು ಮಂಗಳವಾರ ಪ್ರಾರಂಭಿಸಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರದ ವಿರುದ್ಧ ಯುವಕರ ಪ್ರತಿರೋಧವನ್ನು ತೀವ್ರಗೊಳಿಸಲು ರಾಷ್ಟ್ರವ್ಯಾಪಿ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿರುವ 'ಕಾಕ್ರೋಚ್ ಜನತಾ ಪಾರ್ಟಿ'ಯಿಂದ ಪ್ರೇರಿತಗೊಂಡು ಯೂತ್ ಕಾಂಗ್ರೆಸ್ ಈ ಹೆಜ್ಜೆ ಇಟ್ಟಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಅವರು ನ್ಯಾಯಾಲಯದ ವಿಚಾರಣೆಯೊಂದರ ಸಂದರ್ಭದಲ್ಲಿ ಆಡಿದ ಮಾತುಗಳೇ ಈ ಅಭಿಯಾನಕ್ಕೆ ಕಿಡಿ ಹೊತ್ತಿಸಿದವು. ನಿರುದ್ಯೋಗಿ ಯುವಕರನ್ನು 'ಜಿರಳೆಗಳು' ಎಂದು ಸಿಜೆಐ ಕರೆದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು.
ಅಭಿಜೀತ್ ದೀಪ್ಕೆ ಎಂಬುವವರು ಆನ್ಲೈನ್ನಲ್ಲಿ ಈ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಅಭಿಯಾನವನ್ನು ಹುಟ್ಟಿ ಹಾಕಿದರು. ಇದೀಗ ಯೂತ್ ಕಾಂಗ್ರೆಸ್ ಇದನ್ನು ಅಧಿಕೃತ ರಾಜಕೀಯ ಚಳವಳಿಯನ್ನಾಗಿ ಪರಿವರ್ತಿಸಿದೆ.
ಅಭಿಯಾನದ ಪ್ರಮುಖ ಮುಖ್ಯಾಂಶಗಳು
ಯೂತ್ ಕಾಂಗ್ರೆಸ್ ಉಸ್ತುವಾರಿ ಮನೀಶ್ ಶರ್ಮಾ ಮತ್ತು ಅಧ್ಯಕ್ಷ ಉದಯ್ ಭಾನು ಚಿಬ್ ನೇತೃತ್ವದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆ ಹಗರಣಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಒತ್ತಾಯಿಸಿದೆ.
ಈ ಅಭಿಯಾನದಲ್ಲಿ ದೇಶದ ಯುವಕರು ಭಾಗವಹಿಸಲು ಮತ್ತು ನೋಂದಾಯಿಸಿಕೊಳ್ಳಲು ಪ್ರತ್ಯೇಕ ಡಿಜಿಟಲ್ ಪ್ಲಾಟ್ಫಾರ್ಮ್ ಅನ್ನು ಆರಂಭಿಸಲಾಗಿದೆ..
ನಾಯಕರ ಪ್ರತಿಕ್ರಿಯೆ
ದೇಶದಲ್ಲಿ ಉದ್ಯೋಗ, ನ್ಯಾಯ ಮತ್ತು ಉತ್ತರದಾಯಿತ್ವವನ್ನು ಕೇಳುವ ಯುವಕರು ಸರ್ಕಾರದ ಕಣ್ಣಿಗೆ ಜಿರಳೆಗಳಂತೆ ಕಂಡರೆ, ನಾವು ಆ ಹೆಸರನ್ನು ಹೆಮ್ಮೆಯಿಂದ ಸ್ವೀಕರಿಸುತ್ತೇವೆ. ಎಫ್ಐಆರ್, ಜೈಲು ಶಿಕ್ಷೆ ಅಥವಾ ಬೆದರಿಕೆಗಳಿಗೆ ಹೆದರದೆ ಅನ್ಯಾಯದ ವಿರುದ್ಧ ಹೋರಾಡುವ ಯುವ ಭಾರತದ ಪ್ರತೀಕವೇ ಈ 'ಇಂಡಿಯನ್ ಯೂತ್ ಕಾಕ್ರೋಚಸ್' ಎಂದು ಯೂತ್ ಕಾಂಗ್ರೆಸ್ ಉಸ್ತುವಾರಿ ಮನೀಶ್ ಶರ್ಮಾ ಹೇಳಿದ್ದಾರೆ.
ಹಕ್ಕಿಗಾಗಿ ಧ್ವನಿ ಎತ್ತುವ ಯುವಕರನ್ನು ದೇಶದ್ರೋಹಿಗಳೆಂದು ಬಿಂಬಿಸಿ, ಜೈಲಿಗೆ ದೂಡಿ ಅವರ ಧ್ವನಿಯನ್ನು ಅಡಗಿಸಲಾಗುತ್ತಿದೆ. ಆದರೆ ಯೂತ್ ಕಾಂಗ್ರೆಸ್ ಇಂತಹ ಯಾವುದೇ ದಮನಕಾರಿ ನೀತಿಗಳಿಗೆ ಹೆದರುವುದಿಲ್ಲ. ಈ ಹೋರಾಟ ಸಾಮಾಜಿಕ ಜಾಲತಾಣಗಳ ಜೊತೆಗೆ ಬೀದಿಗಿಳಿದು ಪ್ರತಿಭಟನೆ ಮುಂದುವರಿಯಲಿದೆ ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್ ತಿಳಿಸಿದ್ದಾರೆ.

