ಜೋಧ್ಪುರ: ರಾಜಸ್ಥಾನ ಹೈಕೋರ್ಟ್ ಬುಧವಾರ ಅಪ್ರಾಪ್ತೆಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಸಾಮೂಹಿಕ ಲೈಂಗಿಕ ದೌರ್ಜನ್ಯ ಆರೋಪಗಳಿಂದ ಅಸಾರಾಮ್ನನ್ನು ಖುಲಾಸೆಗೊಳಿಸಿದೆ. ಆದರೆ, ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಅವನಿಗೆ ವಿಧಿಸಲಾಗಿರುವ ಜೀವಾವಧಿ ಶಿಕ್ಷೆಯನ್ನು ಖಾಯಂಗೊಳಿಸಿದೆ.
ನ್ಯಾಯಮೂರ್ತಿಗಳಾದ ಅರುಣ್ ಮೊಂಗಾ ಮತ್ತು ಯೋಗೇಂದ್ರ ಕುಮಾರ್ ಪುರೋಹಿತ್ ಅವರನ್ನೊಳಗೊಂಡ ವಿಭಾಗ ಪೀಠವು, ಭಾರತೀಯ ದಂಡ ಸಂಹಿತೆಯ ಪರಿಚ್ಛೇದ 376(ಡಿ) ಮತ್ತು ಪೋಕ್ಸೋ ಕಾಯ್ದೆಯ ಪರಿಚ್ಛೇದ 5(ಜಿ)/6ರ ಅಡಿಯಲ್ಲಿ ದಾಖಲಾಗಿದ್ದ ಸಾಮೂಹಿಕ ಅತ್ಯಾಚಾರ ಮತ್ತು ಮಗುವಿನ ಮೇಲಿನ ತೀವ್ರ ಲೈಂಗಿಕ ದೌರ್ಜನ್ಯದ ಆರೋಪಗಳಿಂದ ಅಸಾರಾಮ್ ನನ್ನು ಖುಲಾಸೆಗೊಳಿಸಿದೆ. ಅದೂ ಅಲ್ಲದೆ, ಅಪರಾಧ ಸಂಚಿಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ಪರಿಚ್ಛೇದ 120(ಬಿ) ಅಡಿಯ ಆರೋಪಗಳಿಂದಲೂ ನ್ಯಾಯಾಲಯವು ಅವನನ್ನು ದೋಷಮುಕ್ತಗೊಳಿಸಿದೆ.
ಆದರೆ, ಅಪ್ರಾಪ್ತೆಯ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದ ಐಪಿಸಿ ಪರಿಚ್ಛೇದ 376(2)(ಎಫ್) ಅಡಿಯಲ್ಲಿನ ದೋಷಿತ್ವವನ್ನು ಪೀಠವು ಎತ್ತಿಹಿಡಿದಿದೆ. ಈ ಮೂಲಕ ವಿಚಾರಣಾ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಖಾಯಂಗೊಳಿಸಿದೆ.
ತೀರ್ಪು ಪ್ರಕಟವಾದ ಬೆನ್ನಲ್ಲೇ ಶರಣಾಗುವಂತೆ ಅಸಾರಾಮ್ ಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಅಸಾರಾಮ್ ಈಗ ಜಾಮೀನಿನಲ್ಲಿ ಹೊರಗಿದ್ದಾನೆ. ಈ ವಾರದ ಆರಂಭದಲ್ಲಿ ಅವನ ಜಾಮೀನನ್ನು ಏಳು ದಿನಗಳ ಕಾಲ ವಿಸ್ತರಿಸಲಾಗಿತ್ತು.
ಇದೇ ತೀರ್ಪಿನಲ್ಲಿ, ಸಹ ಆರೋಪಿಗಳಾದ ಸಂಚಿತಾ ಗುಪ್ತಾ ಅಲಿಯಾಸ್ ಶಿಲ್ಪಿ ಮತ್ತು ಶರತ್ ಚಂದ್ರ ಎಂಬವರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ.
ತನ್ನ ಆಶ್ರಮದಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಅಸಾರಾಮ್ ನನ್ನು 2018ರ ಎಪ್ರಿಲ್ 25ರಂದು ಅಪರಾಧಿ ಎಂದು ಘೋಷಿಸಲಾಗಿತ್ತು.

