ನವದೆಹಲಿ: 'ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ' ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಬೇಸರ ವ್ಯಕ್ತಪಡಿಸಿದ್ದಾರೆ.
'ಪದಾಂಕಿತ ಹಿರಿಯ ವಕೀಲ' ಸ್ಥಾನ ಪಡೆಯಲು ವಕೀಲರೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಇದಕ್ಕಾಗಿ ಆ ವಕೀಲ ಅನುಸರಿಸಿದ ಮಾರ್ಗದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿತು.
'ಈಗಾಗಲೇ ಸಮಾಜದಲ್ಲಿ ವ್ಯವಸ್ಥೆ ಮೇಲೆ ದಾಳಿ ಮಾಡುವ ಪರಾವಲಂಬಿಗಳು ಸಾಕಷ್ಟಿದ್ದಾರೆ. ನೀವೂ ಅವರೊಂದಿಗೆ ಸೇರಲು ಬಯಸುತ್ತೀರಾ' ಎಂದು ಸಿಜೆಐ ಸೂರ್ಯಕಾಂತ್, ಜಾಯ್ಮಾಲ್ಯಾ ಬಾಗ್ಚಿ ಅವರ ಪೀಠವು ಅರ್ಜಿದಾರನನ್ನು ಪ್ರಶ್ನಿಸಿತು.
'ಕೆಲವು ಯುವಕರು ಜಿರಳೆಗಳಿದ್ದಂತೆ. ಅವರಿಗೆ ಯಾವುದೇ ಉದ್ಯೋಗ ಸಿಗುವುದಿಲ್ಲ ಅಥವಾ ವೃತ್ತಿಯಲ್ಲಿ ಯಾವುದೇ ಸ್ಥಾನ ಲಭಿಸುವುದಿಲ್ಲ. ಅಂಥವರು ತಾವೇ ಮಾಧ್ಯಮ, ಸಾಮಾಜಿಕ ಮಾಧ್ಯಮ ಮತ್ತು ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಥವಾ ಇತರೆ ಕಾರ್ಯಕರ್ತರಾಗಿ ಸಮಾಜದ ಎಲ್ಲರ ಮೇಲೆ ದಾಳಿ ಮಾಡಲು ಆರಂಭಿಸುತ್ತಾರೆ' ಎಂದು ಆಕ್ಷೇಪ ವ್ಯಕ್ತಪಡಿಸಿತು.
ಫೇಸ್ಬುಕ್ ಪೋಸ್ಟ್ನಲ್ಲಿ ವಕೀಲ ಬಳಸಿದ ಭಾಷೆಯನ್ನು ಉಲ್ಲೇಖಿಸಿದ ಸಿಜೆಐ, 'ಹಿರಿಯ ವಕೀಲರಾಗಿ ನೇಮಕಗೊಳ್ಳಲು ಬಯಸುವ ವ್ಯಕ್ತಿಯ ನಡವಳಿಕೆ ಇದೇನಾ' ಎಂದು ಪ್ರಶ್ನಿಸಿದರು. 'ಒಂದು ವೇಳೆ, ದೆಹಲಿ ಹೈಕೋರ್ಟ್ ಅರ್ಜಿದಾರರಿಗೆ 'ಪದಾಂಕಿತ ಹಿರಿಯ ವಕೀಲ ಸ್ಥಾನ' ನೀಡಿದರೆ, ಈ ವಕೀಲನ ವೃತ್ತಿಪರ ನಡವಳಿಕೆಯನ್ನು ನೋಡಿ, ಸುಪ್ರೀಂಕೋರ್ಟ್ ಆ ಸ್ಥಾನವನ್ನು ಬದಿಗಿಡುತ್ತದೆ' ಎಂದರು.
'ಹಿರಿಯರ ಸ್ಥಾನಕ್ಕಾಗಿ (ಹಿರಿಯ ವಕೀಲ) ಇಡೀ ವಿಶ್ವವೇ ಅರ್ಹವಿರಬಹುದು, ಆದರೆ, ಆ ಸ್ಥಾನಕ್ಕೆ ಬೇಕಿರುವ ಕನಿಷ್ಠ ಅರ್ಹತೆಯೂ ನಿಮಗಿಲ್ಲ' ಎಂದು ಅರ್ಜಿದಾರರಿಗೆ ಕಟು ಶಬ್ದಗಳಲ್ಲಿ ನ್ಯಾಯಪೀಠ ಎಚ್ಚರಿಕೆ ನೀಡಿತು.
ಕಪ್ಪು ಕೋಟು ಮತ್ತು ಗೌನು ಧರಿಸಿ ನ್ಯಾಯಾಲಯಕ್ಕೆ ಬರುವ ಕೆಲವರು ಹೊಂದಿರುವ ಪದವಿಗಳ ನೈಜತೆಯ ಬಗ್ಗೆಯೇ ಅನುಮಾನಗಳಿವೆ. ಅಂತಹ ಕೆಲವರ ಪದವಿಗಳ ನೈಜತೆ ಕುರಿತು ಸಿಬಿಐನಿಂದ ಪರಿಶೀಲನೆ ನಡೆಸುವ ಇರಾದೆಯೂ ತನಗಿದೆ ಎಂದು ನ್ಯಾಯಪೀಠ ಹೇಳಿತು.
'ಪದಾಂಕಿತ ಹಿರಿಯ ವಕೀಲ' ಹುದ್ದೆ ಆಲಂಕಾರಿಕವಾಗಿ ಇಟ್ಟುಕೊಳ್ಳಬೇಕಾದ ಸಂಕೇತವಲ್ಲ' ಎಂದು ಅರ್ಜಿದಾರರಿಗೆ ತಿಳಿಸಿದ ನ್ಯಾಯಪೀಠ, 'ಬಾರ್ ಕೌನ್ಸಿಲ್ ಕೂಡ ಇಂತಹ ವಿಷಯಗಳಲ್ಲಿ ಯಾವುದೇ ಕ್ರಮ ವಹಿಸುವುದಿಲ್ಲ, ಯಾಕೆಂದರೆ ಅವರಿಗೆ ಇಂಥವರ ಮತಗಳು ಬೇಕಾಗಿವೆ' ಎಂದು ಬೇಸರ ವ್ಯಕ್ತಪಡಿಸಿತು. 'ಆಲಂಕಾರಿಕ ಸಂಕೇತವಲ್ಲ'ನ್ಯಾಯಪೀಠದ ಮುಂದೆ ಕ್ಷಮೆಯಾಚಿಸಿದ ಅರ್ಜಿದಾರರು, ಅರ್ಜಿಯನ್ನು ವಾಪಸ್ ಪಡೆಯಲು ಅನುಮತಿ ಕೋರಿದರು. ಪೀಠವು ಇದಕ್ಕೆ ಅನುಮತಿ ನೀಡಿತು.

