ಕಾಸರಗೋಡು: ಕನ್ನಡ ಸಾಹಿತ್ಯ ಪರಂಪರೆಗೆ ಕಾಸರಗೋಡಿನ ಕೊಡುಗೆ ಅಪೂರ್ವವಾದುದು. ಸುಧೀರ್ಘ ಬಿಡುವಿನ ಬಳಿಕ ಈಗ ಮತ್ತೆ ಕಾಸರಗೋಡಲ್ಲಿ ಕನ್ನಡ ನಾಟಕೋತ್ಸವ ಆಯೋಜಿಸಿರುವುದು ಭರವಸೆ ಮೂಡಿಸಿದೆ. ಹೊಸ ಯುವ ತಲೆಮಾರು ರಂಗಭೂಮಿಯತ್ತ ಆಕರ್ಷಿಸಬೇಕಾದ ಅಗತ್ಯವೂ ಇದೆ ಎಂದು ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಅಭಿಪ್ರಾಯ ವ್ಯಕ್ತಪಡಿಸಿದರು.
ರಂಗಶಂಕರ ಬೆಂಗಳೂರು, ಕಾಸರಗೋಡು ಥಿಯಾಟ್ರಿಕ್ಸ್ ಸೊಸೈಟಿ ಹಾಗೂ ಸವಾಕ್ ಕಾಸರಗೋಡು ಸಹಯೋಗದಲ್ಲಿ ಕಾಸರಗೋಡು ನಗರಸಭಾ ಪುರಭವನದಲ್ಲಿ ಆಯೋಜಿಸಲಾಗಿದ್ದ ನಾಲ್ಕು ದಿನಗಳ ಕನ್ನಡ ನಾಟಕೋತ್ಸವದ ಭಾನುವಾರ ಸಂಜೆ ನಡೆದ ಸಮಾರೋಪದಲ್ಲಿ ಅವರು ಮಾತನಾಡಿದರು.
ಯುವ ರಂಗ ನಿರ್ದೇಶಕ ಪದ್ಮನಾಭ ಬ್ಲಾತೂರ್, ಗೋವಿಂದ ಪೈ ಸ್ಮಾರಕ ಗಿಳಿವಿಂಡಿನ ಖಜಾಂಜಿ ಬಾಲಕೃಷ್ಣ ಶೆಟ್ಟಿಗಾರ್, ರಂಗ ನಿರ್ದೇಶಕ ವಕೀಲ ಟಿ.ವಿ.ಗಂಗಾಧರನ್, ನಗರಸಭಾ ಸದಸ್ಯ ಮಧುಕರ, ಪ್ರಾಧ್ಯಾಪಕ ಡಾ.ಬಾಲಕೃಷ್ಣ ಹೊಸಂಗಡಿ, ರಂಗ ಶಂಕರದ ನಿರ್ದೇಶಕ ಮುದ್ದಣ್ಣ ರಾಟೆಹಳ್ಳಿ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು. ಸವಾಕ್ ರಾಜ್ಯ ಖಜಾಂಜಿ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
ನಾಟಕೋತ್ಸವದ ಅಂಗವಾಗಿ ಆಯೋಜಿಸಲಾದ ಏಕಪಾತ್ರಾಭಿನಯ ಮತ್ತು ರಂಗಗೀತೆಗಳ ಸ್ಪರ್ಧೆಯಲ್ಲಿ ವಿಜೇತರಾದ ಸಮನ್ವಿತಾ ಗಣೇಶ್ ಅಣಂಗೂರು, ಅದಿತಿ ವಾಣೀನಗರ(ಏಕಪಾತ್ರಾಭಿನಯ), ವರದರಾಜ ಅಡ್ಕ, ಜಯಶ್ರೀ ದಿವಾಕರ್(ರಂಗಗೀತೆ) ಇವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ದಿವಾಕರ ಅಶೋಕ ನಗರ ನಿರ್ವಹಿಸಿದರು. ಬಳಿಕ ಕುವೆಂಪು ರಚನೆಯ ಬೆರಳ್ಗೆ ಕೊರಳ್ ನಾಟಕವನ್ನು ನವೀನ್ ಸಾಣೆಹಳ್ಳಿ ನಿರ್ದೇಶನದಲ್ಲಿ ಶೇಷಗಿರಿಯ ಗಜಾನನ ಯುವಕ ಮಂಡಳಿಯವರು ಪ್ರದರ್ಶಿಸಿದರು.

.jpg)
.jpg)
.jpg)
.jpg)
