ನವದೆಹಲಿ: ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ದತ್ತಾಂಶ ಏಕೀಕರಣವನ್ನು ಸುವ್ಯವಸ್ಥೆಗೊಳಿಸುವ ಮತ್ತು ದೇಶದಾದ್ಯಂತ ನ್ಯಾಯಾಲಯ ಸೇವೆಗಳಿಗೆ ಸಾರ್ವಜನಿಕರ ಪ್ರವೇಶವನ್ನು ಸುಧಾರಿಸುವ ಗುರಿ ಹೊಂದಿರುವ 'ಒಂದು ಪ್ರಕರಣ ಒಂದು ದತ್ತಾಂಶ' ಮತ್ತು 'ಸು ಸಹಾಯ' ಡಿಜಟಲ್ ಉಪಕ್ರಮವನ್ನು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಸೋಮವಾರ ಘೋಷಿಸಿದ್ದಾರೆ.
ಸುಪ್ರೀಂ ಕೋರ್ಟ್ನ ಕಲಾಪ ಆರಂಭದಲ್ಲಿ ಈ ಕುರಿತು ಘೋಷಿಸಿರುವ ಸಿಜೆಐ ಸೂರ್ಯ ಕಾಂತ್, 'ಒಂದು ಪ್ರಕರಣ ಒಂದು ದತ್ತಾಂಶ'ದ (One Case One Data) ಮೂಲಕ ಎಲ್ಲ ಹೈಕೋರ್ಟ್ಗಳು, ಜಿಲ್ಲಾ ನ್ಯಾಯಾಲಯಗಳು ಮತ್ತು ತಾಲ್ಲೂಕು ನ್ಯಾಯಾಲಯಗಳಿಂದ ಬಹು ಹಂತದ ಮಾಹಿತಿಯನ್ನು ಏಕೀಕೃತ ವ್ಯವಸ್ಥೆಗೆ ಸಂಯೋಜಿಸಲಾಗುತ್ತದೆ' ಎಂದು ತಿಳಿಸಿದ್ದಾರೆ.
ಈ ಉಪಕ್ರಮದ ಮೂಲಕ ದೇಶದ ನ್ಯಾಯಾಲಯಗಳಲ್ಲಿ ಹೆಚ್ಚು ಸಮಗ್ರ ಹಾಗೂ ಅಂತರ್ ಸಂಪರ್ಕಿತ ಡಿಜಿಟಲ್ ಡೇಟಾಬೇಸ್ ರಚಿಸುವ ಮೂಲಕ ಪ್ರಕರಣವನ್ನು ಸುಲಭ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ.
ಇದೇ ವೇಳೆ ಸುಪ್ರೀಂ ಕೋರ್ಟ್ ವೆಬ್ಸೈಟ್ನೊಂದಿಗೆ ಸಂಯೋಜಿಸಲ್ಪಟ್ಟ ಎ.ಐ ಚಾಲಿತ 'ಸು ಸಹಾಯ' (Su Sahay) ಚಾಟ್ಬಾಟ್ ಅನ್ನು ಆರಂಭಿಸಿರುವುದಾಗಿ ಸಿಜೆಐ ಘೋಷಿಸಿದ್ದಾರೆ.
ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯ ಸಹಯೋಗದೊಂದಿಗೆ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ಐಸಿ) ಈ ಚಾಟ್ಬಾಟ್ ಅನ್ನು ಅಭಿವೃದ್ಧಿಪಡಿಸಿದೆ.
ಇದು ದಾವೆ ಹೂಡುವವರಿಗೆ ನ್ಯಾಯಾಂಗ ಮತ್ತು ನ್ಯಾಯಾಲಯಕ್ಕೆ ಸಂಬಂಧಿಸಿದ ಸೇವೆಗಳನ್ನು ಸುಲಭವಾಗಿ ಪಡೆಯಲು ಅನುಕೂಲವಾಗಲಿದೆ.
'ಇದು ನಾಗರಿಕರಿಗೆ ಸುಪ್ರೀಂ ಕೋರ್ಟ್ನ ಅಗತ್ಯ ಸೇವೆಗಳು, ಮಾರ್ಗಸೂಚಿಗಳು ಹಾಗೂ ಮಾರ್ಗನಿರ್ದೇಶನಗಳನ್ನು ಪಡೆಯಲು ಸರಳ ಹಾಗೂ ಅನುಕೂಲಕರ ಇಂಟರ್ಫೇಸ್ ಅನ್ನು ಒದಗಿಸುತ್ತದೆ' ಎಂದು ಸೂರ್ಯ ಕಾಂತ್ ತಿಳಿಸಿದ್ದಾರೆ.
ಈ ಡಿಜಿಟಲ್ ಉಪಕ್ರಮಗಳಿಗಾಗಿ ರಿಜಿಸ್ಟ್ರಿ ಅಧಿಕಾರಿಗಳು ಹಾಗೂ ಬಾರ್ ಸದಸ್ಯರಿಗೆ ಸಿಜೆಐ ಕೃತಜ್ಞತೆ ಸಲ್ಲಿಸಿದ್ದಾರೆ.

