ನವದೆಹಲಿ: ಸೇವಾನಿರತ ಶಿಕ್ಷಕರು 'ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಯನ್ನು ತೇರ್ಗಡೆಯಾಗುವುದು ಕಡ್ಡಾಯ ಎಂದು ಸುಪ್ರೀಂಕೋರ್ಟ್ ಪುನರುಚ್ಚರಿಸಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸೇವೆಯಲ್ಲಿ ಉಳಿಯಲು ಈ ಹಿಂದೆ ವಿಧಿಸಿದ್ದ ಗಡುವಿನ ಅವಧಿಯನ್ನು 2028ರ ಆಗಸ್ಟ್ 31ರವರೆಗೆ ವಿಸ್ತರಿಸಿದೆ.
ಅಂಜುಮಾನ್ ಇಶಾತ್ ಇ- ತಲೀಮ್ ಟ್ರಸ್ಟ್ ಪ್ರಕರಣದಲ್ಲಿ ನೀಡಿದ್ದ ತೀರ್ಪು ಪ್ರಶ್ನಿಸಿ ಹಲವು ರಾಜ್ಯ ಸರ್ಕಾರಗಳು, ಶಿಕ್ಷಕರ ಸಂಘಟನೆಗಳು ಹಾಗೂ ಶಿಕ್ಷಕರು ಸಲ್ಲಿಸಿದ್ದ 65 ಪುನರ್ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ದೀಪಾಂಕರ್ ದತ್ತಾ, ಮನಮೋಹನ್ ಸಿಂಗ್ ಅವರಿದ್ದ ನ್ಯಾಯಪೀಠ, ತನ್ನ ಹಿಂದೆ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ.
2025ರ ಸೆಪ್ಟೆಂಬರ್ 1ಕ್ಕೆ ಅನ್ವಯವಾಗುವಂತೆ ನಿವೃತ್ತಿಗೂ ಐದು ವರ್ಷಕ್ಕೂ ಮುನ್ನ ಟಿಇಟಿ ತೇರ್ಗಡೆ ಕಡ್ಡಾಯ ಹಾಗೂ ಮಕ್ಕಳ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ -2009ಕ್ಕೂ ಜಾರಿಗೂ ಮುನ್ನ ಸೇವೆಗೆ ಸೇರ್ಪಡೆಗೊಂಡವರಿಗೂ ಟಿಇಟಿ ಕಡ್ಡಾಯಗೊಳಿಸಿದ್ದ 2025ರ ಆದೇಶವನ್ನು ಮರುಪರಿಶೀಲಿಸಬೇಕು ಎಂದು ಅರ್ಜಿದಾರರು ನ್ಯಾಯಪೀಠದ ಮುಂದೆ ಕೋರಿದ್ದರು.
ಅರ್ಜಿದಾರರ ಮನವಿಯನ್ನು ಸಾರಸಾಗಟಾಗಿ ತಳ್ಳಿಹಾಕಿರುವ ನ್ಯಾಯಪೀಠ, 'ಉಳಿದಿರುವ ಸಮಯ ಹಾಗೂ ಸಂಪನ್ಮೂಲಗಳನ್ನು ಬಳಸಿಕೊಂಡು ಸಂಬಂಧಪಟ್ಟ ಆಡಳಿತ ಮಂಡಳಿಗಳು ಆದಷ್ಟು ಶೀಘ್ರವಾಗಿ ಟಿಎಟಿ ಪರೀಕ್ಷೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಈ ಹಿಂದೆ ನಿಗದಿಪಡಿಸಿದ್ದ ಗಡುವು ವಿಸ್ತರಿಸಿದ್ದು, ಈ ಅವಧಿಯನ್ನು 2028ರ ಆಗಸ್ಟ್ 28ರವರೆಗೆ ವಿಸ್ತರಿಸಲಾಗುತ್ತಿದೆ' ಎಂದು ತಿಳಿಸಿದೆ.
'ಈಗಾಗಲೇ ವಿಧಿಸಿರುವ ಗಡುವಿನ ಅವಧಿಯನ್ನು ಮತ್ತೆ ವಿಸ್ತರಿಸುವುದಿಲ್ಲ' ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದೆ.

