ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್), ದಾಖಲೆ ಪ್ರಮಾಣದ ಮತದಾನದಿಂದಾಗಿ ಗಮನ ಸೆಳೆದಿರುವ ಪಶ್ಚಿಮ ಬಂಗಾಳದತ್ತ ದೇಶವೇ ಕುತೂಹಲದಿಂದ ಫಲಿತಾಂಶವನ್ನು ಎದುರು ನೋಡುತ್ತಿದೆ.
294 ಸದಸ್ಯ ಬಲದ ಪಶ್ಚಿಮ ಬಂಗಾಳದಲ್ಲಿ ಎರಡು ಹಂತಗಳಲ್ಲಿ ಮತದಾನವಾಗಿತ್ತು.
ಒಟ್ಟಾರೆ ಮತದಾನ ಪ್ರಮಾಣ ಶೇ92.47ರಷ್ಟು ದಾಖಲಾಗಿದೆ. ಇದು ಸ್ವಾತಂತ್ರ್ಯ ನಂತರ ರಾಜ್ಯದಲ್ಲಿ ದಾಖಲಾಗಿರುವ ಅತ್ಯಂತ ಗರಿಷ್ಠ ಪ್ರಮಾಣದ ಮತದಾನವಾಗಿದೆ.
2.5 ಲಕ್ಷಕ್ಕೂ ಅಧಿಕ ಕೇಂದ್ರೀಯ ಅರೆಸೇನಾ ಪಡೆ ಸಿಬ್ಬಂದಿ ನಿಯೋಜನೆ ಮೂಲಕ ಚುನಾವಣಾ ಆಯೋಗವು ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಭದ್ರತೆಗೆ ಕ್ರಮ ಕೈಗೊಂಡಿತ್ತು. ಬಹಳಷ್ಟು ಅಳೆದು ತೂಗಿದ ಬಳಿಕ ರಾಜ್ಯದ ಪೊಲೀಸ್ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಈ ಬಾರಿ ಚುನಾವಣೆ ಸಂಬಂಧಿತ ಹಿಂಸಾಚಾರ ಅತ್ಯಂತ ಕಡಿಮೆ ಕಂಡುಬರಲು ಆಯೋಗದ ಈ ಕಠಿಣ ಕ್ರಮ ಕಾರಣ ಎನ್ನಲಾಗುತ್ತಿದೆ. ಅಲ್ಲದೇ, ಪಶ್ಚಿಮ ಬಂಗಾಳದ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಾವುಗಳು ವರದಿಯಾಗಿಲ್ಲ.
ಪಶ್ಚಿಮ ಬಂಗಾಳದಲ್ಲಿ 21 ವರ್ಷಗಳ ಬಳಿಕ ಎಸ್ಐಆರ್ ನಡೆಸಲಾಗಿದೆ. ಈ ಪ್ರಕ್ರಿಯೆ ಸಾಕಷ್ಟು ವಿವಾದಕ್ಕೆ ಒಳಗಾಗಿತ್ತು. ವ್ಯಾಪಕ ವಿರೋಧವೂ ವ್ಯಕ್ತವಾಗಿತ್ತು. ಎಸ್ಐಆರ್ ಬಳಿಕ 90 ಲಕ್ಷಕ್ಕೂ ಅಧಿಕ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರು ರಾಜ್ಯದಾದ್ಯಂತ ಬಿರುಸಿನ ಪ್ರಚಾರ ಕೈಗೊಂಡು, ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಭ್ರಷ್ಟಾಚಾರ, ಕಾನೂನು-ಸುವ್ಯವಸ್ಥೆ ಕುಸಿತ, ಮಹಿಳೆಯರ ಸುರಕ್ಷತೆ ಹಾಗೂ ನಿರುದ್ಯೋಗದಂತಹ ವಿಚಾರಗಳನ್ನು ಪ್ರಸ್ತಾಪಿಸಿ ಟಿಎಂಸಿ ವಿರುದ್ಧ ಹರಿಹಾಯ್ದಿದ್ದ ಕೇಸರಿ ಪಕ್ಷದ ನಾಯಕರು, ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಿಸಿದ್ದರು.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಮುಂಚೂಣಿಯಲ್ಲಿ ನಿಂತು ಬಿಜೆಪಿಗೆ ತಿರುಗೇಟು ನೀಡಿದ್ದರು. ಎಸ್ಐಆರ್ ವೇಳೆ ಕಂಡುಬಂದಿತ್ತು ಎನ್ನಲಾದ ಕಿರುಕುಳ, ಇತರ ರಾಜ್ಯಗಳಲ್ಲಿ ಬಂಗಾಳಿ ಭಾಷಿಕರಿಗೆ ನೀಡುತ್ತಿರುವ ಕಿರುಕುಳ ಹಾಗೂ 'ಹೊರಗಿನವರು' ಎಂಬ ವಿಚಾರಗಳನ್ನು ಮುಂದಿಟ್ಟುಕೊಂಡು ಟಿಎಂಸಿ ನಾಯಕರು ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು.
ಈ ರಾಜಕೀಯ ಸಂಕಥನಗಳು ಯಾರಿಗೆ ಮತ ಫಸಲು ತಂದುಕೊಡಲಿವೆ ಹಾಗೂ ಯಾರಿಗೆ ದುಬಾರಿಯಾಗಲಿವೆ ಎಂಬುದು ಗೊತ್ತಾಗಲಿದೆ.

