ಕಾಸರಗೋಡು: ಮಡಿಕ್ಕೆ ಪಂಚಾಯಿತಿ ವೆಳ್ಳೂಡ ಎಂಬಲ್ಲಿ ಹಟ್ಟಿಗೆ ನುಗ್ಗಿದ ಚಿರತೆ ಕರುವನ್ನು ಕಚ್ಚಿ ಎಳೆದೊಯ್ದು ತಿಂದು ಹಾಕಿದೆ. ಹೈನುಗಾರ ಸುರೇಶ್ ಎಂಬವರ ಹಟ್ಟಿಯಿಂದ ಚಿರತೆ ಕರುವನ್ನು ಕಚ್ಚಿಕೊಂಡು ಹೋಗಿದೆ. ಹಟ್ಟಿಯಲ್ಲಿ ಸುಮಾರು 40ರಷ್ಟು ದನಗಳಿದ್ದು, ಎಂದಿನಂತೆ ಮಂಗಳವಾರ ರಾತ್ರಿ ದನಗಳಿಗೆ ಮೇವು ನೀಡಲು ಸುರೇಶ್ ಹಟ್ಟಿಗೆ ತಲುಪಿದಾಗ ಕರು ನಾಪತ್ತೆಯಾಗಿತ್ತು. ಆಸುಪಾಸು ಹುಡುಕಾಡಿದರೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಬುಧವಾರ ಬೆಳಗ್ಗೆ ಮತ್ತೆ ಹುಡುಕಾಟ ಮುಂದುವರಿಸಿದಾಗ ಸಮೀಪದ ಕಾಡಿನಲ್ಲಿ ಕರುವಿನ ಕಳೇಬರದ ಅವಶಿಷ್ಟ ಕಂಡು ಬಂದಿದೆ.
ಕರುವನ್ನು ಕಚ್ಚಿ ಎಳೆದೊಯ್ದ ದಾರಿಯಲ್ಲಿ ಸಾಗಿದಾಗ ಕಳೆಬರ ಪತ್ತೆಯಾಗಿತ್ತು. ಅರಣ್ಯಾಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿದರು. ಮೂರು ತಿಂಗಳ ಹಿಂದೆ ಈ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿತ್ತು.

