ಒಸ್ಲೊ: 'ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಇರಬಹುದು ಅಥವಾ ಉಕ್ರೇನ್ನಲ್ಲಿ ನಡೆಯುತ್ತಿರುವ ಯುದ್ಧ ಇರಬಹುದು ಸೇನಾ ಕಾರ್ಯಾಚರಣೆಗಳಿಂದ ಮಾತ್ರವೇ ಶಾಂತಿ ಪಡೆದುಕೊಳ್ಳುವುದು ಸಾಧ್ಯವಿಲ್ಲ. ಈ ಎರಡೂ ಯುದ್ಧಗಳು ಶೀಘ್ರದಲ್ಲಿಯೇ ಕೊನೆಗೊಳ್ಳಬೇಕು' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನಾರ್ವೆ ಪ್ರಧಾನಿ ಜೋನಸ್ ಗರ್ ಸ್ಟೋರ್ ಅವರೊಂದಿನ ದ್ವೀಪಕ್ಷೀಯ ಮಾತುಕತೆ ಬಳಿಕ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ ಮಾತನಾಡಿ, 'ಪಶ್ಚಿಮ ಏಷ್ಯಾ ಮತ್ತು ಉಕ್ರೇನ್ ಯುದ್ಧಗಳು ಶೀಘ್ರದಲ್ಲಿಯೇ ಕೊನೆಗೊಂಡು ಶಾಂತಿ ಸ್ಥಾಪಿಸಲು ನಡೆಸಲಾಗುವ ಎಲ್ಲಾ ಪ್ರಯತ್ನವನ್ನು ನಾವು (ಭಾರತ ಮತ್ತು ನಾರ್ವೆ) ಬೆಂಬಲಿಸುತ್ತೇವೆ' ಎಂದರು.
'ನಿಯಮಗಳಿಂದ ಕೂಡಿರುವ ವ್ಯವಸ್ಥೆ, ಮಾತುಕತೆ ಮತ್ತು ರಾಜತಾಂತ್ರಿಕತೆಯಲ್ಲಿ ಭಾರತ ಮತ್ತು ನಾರ್ವೆ ನಂಬಿಕೆ ಇರಿಸಿದೆ. ಯಾವುದೇ ವಿಚಾರಕ್ಕಾದರೂ ಸರಿ, ಸೇನಾ ಕಾರ್ಯಚರಣೆಯಿಂದ ಮಾತ್ರವೇ ಪರಿಹಾರ ದೊರಕುವುದಿಲ್ಲ ಎನ್ನುವುದನ್ನು ನಾವು ಒಪ್ಪುತ್ತೇವೆ' ಎಂದರು.
'ಜಗತ್ತು ಈಗ ಅನಿಶ್ಚಿತತೆಯಿಂದ ಕೂಡಿದೆ. ಹೆಚ್ಚುತ್ತಿರುವ ಜಾಗತಿಕ ಸವಾಲುಗಳನ್ನು ಪರಿಹರಿಸಲು ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆಯಾಗಬೇಕು. ಭಯೋತ್ಪಾದನೆಯನ್ನು ಬುಡದಿಂದಲೇ ಕಿತ್ತು ಹಾಕಬೇಕು ಎಂಬುವುದು ನಮ್ಮ (ಭಾರತ ಮತ್ತು ನಾರ್ವೆ) ಬದ್ಧತೆಯಾಗಿದೆ' ಎಂದು ಅಭಿಪ್ರಾಯಪಟ್ಟರು.

