ಮುಂಬೈ: ದೇಶದ ಆರ್ಥಿಕತೆಯ ಬಗ್ಗೆ ಕೆಲವರು ನಕಾರಾತ್ಮಕ, ನಿರಾಶಾದಾಯಕ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ. ಭಯ ಹುಟ್ಟಿಸುವ ಇಂತಹ ಪ್ರಚಾರ ತಂತ್ರಗಳನ್ನು ಭಾರತ ಎಂದಿಗೂ ಸಹಿಸುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಿಡಿಕಾರಿದ್ದಾರೆ.
ಮುಂಬೈನಲ್ಲಿ ಇಂದು ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ನ (SIDBI) 37ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸದ್ಯದ ಜಾಗತಿಕ ಅನಿಶ್ಚಿತತೆಯ ಕೆಟ್ಟ ಪರಿಣಾಮದ ಹೊರತಾಗಿಯೂ ಭಾರತದ ಆರ್ಥಿಕತೆಯು ಉತ್ತಮವಾಗಿದೆ. ಟೀಕಾಕಾರರು ಇದನ್ನು ಗಮನಿಸುವುದಿಲ್ಲ ಎಂದು ಪ್ರತಿಪಾದಿಸಿದರು.
ನಮ್ಮ ಮಾತು, ಕೆಲಸಗಳು ಜಾಗತಿಕ ಪರಿಣಾಮಗಳಿಂದ ಆತಂಕಗೊಂಡಿರುವ ಜನರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡಬೇಕೇ ಹೊರತು ನಿರಾಶಾವಾದವನ್ನಲ್ಲ ಎಂದು ಅವರು ಇತ್ತೀಚಿಗಿನ ಕಾಕ್ರೋಚ್ ಜನತಾ ಪಾರ್ಟಿ ಅಭಿಯಾನದ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಇರಾನ್-ಇಸ್ರೇಲ್ ಯುದ್ಧದ ಅತ್ಯಂತ ಗಂಭೀರ ಪರಿಣಾಮದ ಹೊರತು ಭಾರತದ ಆರ್ಥಿಕತೆ ಸ್ಥಿತಿಸ್ಥಾಪಕತ್ವವನ್ನು ಕಾಯ್ದುಕೊಂಡಿದೆ. ಇಂತಹ ಸಂದರ್ಭದಲ್ಲಿ ನಾನು ಮೂರು ಎಫ್ಗಳು ಬಗ್ಗೆ ದೇಶದ ಜನ ಜಾಗರೂಕರಾಗಬೇಕೆಂದು ಮನವಿ ಮಾಡುತ್ತೇನೆ ಎಂದರು.
ಫ್ಯೂಯಲ್, ಫಾರಿನ್ ಎಕ್ಸ್ಚೇಂಜ್, ಫರ್ಟಿಲೈಜರ್ ಎಂಬ ಮೂರು ಎಫ್ಗಳ ಬಗ್ಗೆ ಜನ ಅತ್ಯಂತ ಜಾಗರೂಕವಾಗಿದ್ದು ಅವುಗಳ ಸಮರ್ಪಕ ಬಳಕೆಯನ್ನು ಅರ್ಥ ಮಾಡಿಕೊಳ್ಳಬೇಕು. ಆ ಮೂಲಕ ಬಿಕ್ಕಟ್ಟಿನ ಸಮಯದಲ್ಲಿ ಜನ ಜವಾಬ್ದಾರಿತನದಿಂದ ವರ್ತಿಸಬೇಕು ಎಂದು ಪರೋಕ್ಷವಾಗಿ ಕರೆ ನೀಡಿದರು. ಈ ಕುರಿತು ಡೆಕ್ಕನ್ ಹೆರಾಲ್ಡ್ ವೆಬ್ಸೈಟ್ ವರದಿ ಮಾಡಿದೆ.

