ನವದೆಹಲಿ: ಶೈಕ್ಷಣಿಕ ಮತ್ತು ಆರ್ಥಿಕವಾಗಿ ಮುಂದುವರಿದವರಿಗೆ ಸಾಮಾಜಿಕ ಚಲನಶೀಲತೆ ಇರುತ್ತದೆ, ಹಿಂದುಳಿದ ವರ್ಗಗಳಿಗೆ ಸೇರಿದ್ದರೂ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಸಬಲರಾಗಿರುವ ಕುಟುಂಬಗಳ ಮಕ್ಕಳಿಗೆ ಮೀಸಲಾತಿ ಸೌಲಭ್ಯ ಏಕೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಪ್ರಶ್ನಿಸಿದೆ.
ಅರ್ಜಿದಾರರ ತಂದೆ-ತಾಯಿ ಸರ್ಕಾರಿ ನೌಕರರಾಗಿದ್ದು, ಅವರನ್ನು ಮೀಸಲಾತಿಯಿಂದ ಹೊರಗಿಟ್ಟ ಕ್ರಮವನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು.
ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ವಲ್ ಭುಯಾನ್ ಅವರಿದ್ದ ಪೀಠ ನಡೆಸಿತು.
'ಇಬ್ಬರೂ ಪೋಷಕರು ಐಎಎಸ್ ಅಧಿಕಾರಿಗಳಾಗಿರುವಾಗ, ಅವರ ಮಕ್ಕಳಿಗೆ ಮೀಸಲಾತಿ ಏಕೆ? ಶೈಕ್ಷಣಿಕ ಮತ್ತು ಆರ್ಥಿಕ ಸಬಲೀಕರಣದೊಂದಿಗೆ ಸಾಮಾಜಿಕ ಚಲನಶೀಲತೆಯೂ ಇರುತ್ತದೆ. ಮಕ್ಕಳಿಗಾಗಿ ಪುನಃ ಮೀಸಲಾತಿ ಕೇಳಿದರೆ, ನಾವು ಎಂದಿಗೂ ಅದರಿಂದ ಹೊರಬರುವುದಿಲ್ಲ' ಎಂದು ಪೀಠ ನುಡಿಯಿತು.
'ಪೋಷಕರು ಉತ್ತಮ ಉದ್ಯೋಗಗಳಲ್ಲಿದ್ದು ಒಳ್ಳೆಯ ಆದಾಯ ಹೊಂದಿದ್ದರೆ ಅವರ ಮಕ್ಕಳು ಮೀಸಲಾತಿಯಿಂದ ಹೊರಬರಬೇಕು' ಎಂದು ಪೀಠ ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿತು.
ಶ್ರೀಮಂತ ವರ್ಗಗಳನ್ನು ಮೀಸಲಾತಿ ಸೌಲಭ್ಯಗಳಿಂದ ಹೊರಗಿಡಲು ಸರ್ಕಾರ ಈಗಾಗಲೇ ಹಲವು ಆದೇಶಗಳನ್ನು ಜಾರಿಗೊಳಿಸಿದೆ. ಆದರೆ ಈಗ ಅವುಗಳನ್ನು ಪ್ರಶ್ನಿಸಲಾಗುತ್ತಿದೆ ಎಂದು ಪೀಠ ಹೇಳಿತು.
ಮಾನವ ಇತಿಹಾಸವನ್ನೇ ಬದಲಿಸಿದ್ದ ಎಲ್ ನಿನೊ! ಕಾದಿದೆಯಾ ಮಹಾ ವಿಪತ್ತು?
ಏನಿದು ಪ್ರಕರಣ?
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ (ಕೆಪಿಟಿಸಿಎಲ್) ಮೀಸಲು ವರ್ಗದ ಅಡಿಯಲ್ಲಿ ಅರ್ಜಿದಾರರನ್ನು ಸಹಾಯಕ ಎಂಜಿನಿಯರ್ (ವಿದ್ಯುತ್) ಹುದ್ದೆಗೆ ಆಯ್ಕೆ ಮಾಡಲಾಗಿತ್ತು.
ಆದರೆ, ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿಯು ಅವರು ಕೆನೆಪದರದೊಳಗೆ ಬರುತ್ತಾರೆ ಎಂದು ತೀರ್ಮಾನಿಸಿ, ಅವರ ಜಾತಿ ಪ್ರಮಾಣಪತ್ರದ ಸಿಂಧುತ್ವವನ್ನು ರದ್ದುಗೊಳಿಸಿತು.
ಅಭ್ಯರ್ಥಿಯ ಇಬ್ಬರೂ ಪೋಷಕರು ಸರ್ಕಾರಿ ನೌಕರರಾಗಿದ್ದು, ಅವರ ಒಟ್ಟು ಆದಾಯವು ನಿಗದಿತ ಕೆನೆಪದರದ ಮಿತಿಯನ್ನು (₹ 8 ಲಕ್ಷ) ಮೀರಿದೆ ಎಂದು ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಕುರುಬ ಸಮುದಾಯಕ್ಕೆ ಸೇರಿದ್ದ ಅರ್ಜಿದಾರರ ಜಾತಿ ಪ್ರಮಾಣಪತ್ರ ಸಿಂಧುತ್ವ ಈ ಕಾರಣಕ್ಕೆ ರದ್ದುಗೊಂಡಿತ್ತು.

