ನವದೆಹಲಿ: ಪರಿಸರವಾದಿ ಹಾಗೂ ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಶನಿವಾರ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ)ನೇತೃತ್ವದ ಆನ್ಲೈನ್ ಕಾಕ್ರೋಚ್ ಚಳವಳಿಯನ್ನು ಬೆಂಬಲಿಸಿದ್ದಾರೆ.
ತನ್ನನ್ನು ''ಗೌರವಾನ್ವಿತ ಜಿರಳೆ'' ಎಂದು ಕರೆದುಕೊಂಡಿರುವ ಅವರು, ಆನ್ಲೈನ್ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವ ಬದಲು ಯುವ ಜನರು ಎತ್ತಿರುವ ಕಳವಳಗಳತ್ತ ಗಮನಹರಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿವಾದದ ಕುರಿತು ಮಾತನಾಡಿದ ವಾಂಗ್ಚುಕ್, ಈ ಅಭಿಯಾನವನ್ನು ಪ್ರಜಾಸತ್ತಾತ್ಮಕ ಪ್ರತಿಕ್ರಿಯೆಯ ರೂಪವಾಗಿ ನೋಡಬೇಕೇ ಹೊರತು ಬೆದರಿಕೆಯಾಗಿ ಅಲ್ಲ ಎಂದಿದ್ದಾರೆ. ''ಮೊದಲನೆಯದಾಗಿ ನಾನು ಇದರಿಂದ ತುಂಬಾ ಪ್ರಭಾವಿತನಾದೆ'' ಎಂದು ಅವರು ತಿಳಿಸಿದ್ದಾರೆ.
''ನಮ್ಮ ಯುವ ಪೀಳಿಗೆಯ ಇಂತಹ ಸೃಜನಶೀಲ ಅಭಿವ್ಯಕ್ತಿಗಳ ಬಗ್ಗೆ ಚಿಂತಿಸುವ ಅಥವಾ ಹೆದರುವ ಅಗತ್ಯತೆ ಇಲ್ಲ. ಸರಕಾರ ಸಂದೇಶವನ್ನು ಸ್ವೀಕರಿಸಬೇಕು. ಸಂದೇಶ ತಂದವನನ್ನು ಕೊಲ್ಲಬೇಡಿ. ನಾವು ಸಂದೇಶ ತಂದವನನ್ನು ಕೊಂದರೆ, ಸಂದೇಶ ಕೊನೆಗೊಳ್ಳುವುದಿಲ್ಲ'' ಎಂದು ಅವರು ಹೇಳಿದ್ದಾರೆ.
ಚಳುವಳಿಗೆ ಸೇರುತ್ತಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಾಗ್ಚುಕ್, ತನಗೆ ಸದಸ್ಯತ್ವಕ್ಕೆ ಅರ್ಹತೆ ಇಲ್ಲ. ಆದರೂ ಅದರ ಸಂದೇಶದೊಂದಿಗೆ ಗುರುತಿಸಿಕೊಳ್ಳುವುದಾಗಿ ಹೇಳಿದರು.
''ಇದರ ಬಗ್ಗೆ ಮಾತನಾಡುವಂತೆ ನನಗೆ ಹಲವು ಕಡೆಯಿಂದ ವಿನಂತಿಗಳು ಬಂದಿವೆ. ನಾನು ಕೂಡ ಸದಸ್ಯನಾಗಬೇಕು ಎಂದು ಕೆಲವರು ಹೇಳುತ್ತಿದ್ದಾರೆ'' ಎಂದು ಅವರು ತಿಳಿಸಿದರು.
''ನನಗೆ ಅರ್ಹತೆ ಇದೆ ಎಂದು ನಾನು ಭಾವಿಸುವುದಿಲ್ಲ. ನಾನು ನಿರುದ್ಯೋಗಿಯೂ ಅಲ್ಲ, ಸೋಮಾರಿಯೂ ಅಲ್ಲ. ಆದುದರಿಂದ ವಿಷಾದದಿಂದ ಹೇಳುತ್ತಾನೆ ನಾನು ಇದರ ಸದಸ್ಯನಲ್ಲ. ಆದರೆ, ನಾನು ನನ್ನನ್ನು ಗೌರವಾನ್ವಿತ ಜಿರಳೆ ಎಂದು ಪರಿಗಣಿಸುತ್ತೇನೆ'' ಎಂದು ಅವರು ಹೇಳಿದ್ದಾರೆ.
ಪತ್ರಿಕೆಗಳಲ್ಲಿ ಪ್ರಕಟವಾಗುವ ರಾಜಕೀಯ ವಿಡಂಬನೆ ಮತ್ತು ವ್ಯಂಗ್ಯಚಿತ್ರಗಳಿಗೆ ಇದನ್ನು ಹೋಲಿಸಿದ ಸೋನಮ್ ವಾಂಗ್ಚುಕ್, ಹಾಸ್ಯ ಮತ್ತು ಸಂಕೇತಗಳ ಮೂಲಕ ವ್ಯಕ್ತಪಡಿಸುವ ಭಿನ್ನಾಭಿಪ್ರಾಯ ಕಾನೂನು ಬದ್ಧ ಪ್ರಜಾಸತ್ತಾತ್ಮಕ ಸಾಧನವಾಗಿದೆ ಎಂದರು.
ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಕಾರರು ಪ್ರಧಾನ ಮಂತ್ರಿ, ಗೃಹ ಸಚಿವರು ಅಥವಾ ರಕ್ಷಣಾ ಸಚಿವರ ವ್ಯಂಗ್ಯ ಚಿತ್ರಗಳನ್ನು ಬಿಡಿಸಿದ್ದಾರೆ ಎಂಬ ಕಾರಣಕ್ಕಾಗಿ ನೀವು ಅವರ ಮೇಲೆ ಗುಂಡು ಹಾರಿಸುವುದಿಲ್ಲ. ಆದುದರಿಂದ ಇದು ಕೂಡ ಒಂದು ವಿಡಂಬನೆ. ಇದನ್ನು ಒಂದು ಪ್ರತಿಕ್ರಿಯೆಯಾಗಿ ನೋಡಿ ಎಂದು ವಾಂಗ್ಚುಕ್ ಹೇಳಿದರು.
ಚಳವಳಿಯ ಅಹಿಂಸಾತ್ಮಕ ಮತ್ತು ಕಾಲ್ಪನಿಕ ಸ್ವರೂಪವನ್ನು ಶ್ಲಾಘಿಸಿದ ಸೋನಮ್ ವಾಂಗ್ಚುಕ್, ದೇಶದ ಯುವಕರು ಸಂಘರ್ಷದ ಬದಲು ಡಿಜಿಟಲ್ ಸೃಜನಶೀಲತೆಯನ್ನು ಬಳಸಿಕೊಂಡಿದ್ದಾರೆ. ಇಂತಹ ವಿಷಯಗಳೇ ಭಾರತವನ್ನು ''ವಿಶ್ವ ಗುರು''ವನ್ನಾಗಿ ಮಾಡುತ್ತದೆ ಎಂದಿದ್ದಾರೆ.

