ಕೋಲ್ಕತ್ತ: ಪಶ್ಚಿಮ ಬಂಗಾಳ ಸರ್ಕಾರವು ಪ್ರಾಣಿ ವಧೆ ಮಾರ್ಗಸೂಚಿಗೆ ಸಂಬಂಧಿಸಿದಂತೆ ನೀಡಿರುವ ಸಾರ್ವಜನಿಕ ಪ್ರಕಟಣೆ ವಿಚಾರದಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಮಧ್ಯಪ್ರವೇಶಿಸುವಂತೆ ಕಾಂಗ್ರೆಸ್ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ ಭಾನುವಾರ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರಿಗೆ ಪತ್ರ ಬರೆದಿರುವ ಚೌಧರಿ, 'ರಾಜ್ಯ ಸರ್ಕಾರದ ಸಾರ್ವಜನಿಕ ಪ್ರಕಟಣೆಯು ನಿರ್ದಿಷ್ಟವಾಗಿ ಮುರ್ಷಿದಾಬಾದ್ ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಗೊಂದಲ ಮತ್ತು ಗಲಭೆಗಳಿಗೆ ಕಾರಣವಾಗುವಂತಿದೆ' ಎಂದು ಅವರು ಹೇಳಿದ್ದಾರೆ.
ಮುರ್ಷಿದಾಬಾದ್ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯದವರೇ ಹೆಚ್ಚಿದ್ದಾರೆ. ಇಂಥ ಪ್ರದೇಶಗಳನ್ನು ಗುರುತಿಸಿ ಜನರು ತಮ್ಮ ಧಾರ್ಮಿಕ ನಂಬಿಕೆಯನ್ನು ಅನುಸರಿಸಲು ಅವಕಾಶ ನೀಡಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಅಧಿಕೃತ ಪ್ರಮಾಣಪತ್ರ (ಫಿಟ್ನೆಸ್ ಸರ್ಟಿಫಿಕೇಟ್) ಇಲ್ಲದೆ ಎತ್ತು, ಆಕಳು, ಎಮ್ಮೆ ಮತ್ತು ಕೋಣಗಳನ್ನು ವಧೆ ಮಾಡುವಂತಿಲ್ಲ ಎಂದು ಮೇ 13ರಂದು ನೋಟಿಸ್ ಮೂಲಕ ತಿಳಿಸಲಾಗಿತ್ತು.
ತೃಣಮೂಲ ಕಾಂಗ್ರೆಸ್ಬಿಜೆಪಿ ಆಡಳಿತದಲ್ಲಿರುವ ದೇಶದ ಇತರ ರಾಜ್ಯಗಳಲ್ಲಿ ಗೋವುಗಳಿಗೆ ಜನನ ಪ್ರಮಾಣಪತ್ರ ನೀಡುತ್ತದೆಯೇ?
ಗೋವುಗಳ ಜನನ ಪ್ರಮಾಣಪತ್ರ ತೋರಿಸಿ: ಬಿಜೆಪಿ ಶಾಸಕಿ
ಪಶ್ಚಿಮ ಬಂಗಾಳದ ಬಿಜೆಪಿಯ ನೂತನ ಶಾಸಕಿ, ರೇಖಾ ಪಾತ್ರಾ ಅವರು ಗೋವುಗಳಿದ್ದ ವಾಹನವನ್ನು ತಡೆದು, ಗೋವುಗಳನ್ನು ಕಸಾಯಿಖಾನೆಗೆ ರವಾನಿಸುವ ಮುನ್ನ ಅವುಗಳ ಜನನ ಪ್ರಮಾಣಪತ್ರವನ್ನು ತೋರಿಸಬೇಕು ಎಂದು ಆಗ್ರಹಿಸಿದ್ದಾರೆ ಎಂಬುದಾಗಿ ಎನ್.ಡಿ.ಟಿ.ವಿ. ವರದಿ ಮಾಡಿದೆ.
ಹಿಂಗಲ್ಗಂಜ್ನ ಲೇಬುಖಾಲಿ ಪ್ರದೇಶದಲ್ಲಿ ವಾಹನವನ್ನು ತಡೆದು, ಗೋವುಗಳನ್ನು ಕೆಳಗಿಳಿಸಿದರು. ಅವುಗಳನ್ನು ರಸ್ತೆಬದಿಯ ಮರಗಳಿಗೆ ಕಟ್ಟಿಹಾಕಿ, ಕುಡಿಯಲು ನೀರು, ಆಹಾರ ನೀಡಿದರು.
'ಅನಧಿಕೃತ ಗೋವು ವ್ಯಾಪಾರಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಸೂಚಿಸಿದ್ದಾರೆ. ಸರ್ಕಾರದ
ನೂತನ ಮಾರ್ಗಸೂಚಿ ಅನ್ವಯ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗೋವುಗಳನ್ನು ಕಸಾಯಿಖಾನೆಗೆ ಕಳಿಸುವಂತಿಲ್ಲ' ಎಂದು ಹೇಳಿದರು.
'ಅಕ್ರಮವಾಗಿ ಗೋವುಗಳನ್ನು ಸಾಗಿಸುವುದು ಕಂಡುಬಂದಲ್ಲಿ ಅವರನ್ನು ತಡೆದು, ಗೋವುಗಳ
ಜನನ ಪ್ರಮಾಣಪತ್ರವನ್ನು ತೋರಿಸುವಂತೆ ಕೇಳಲಾಗುವುದು. ಪ್ರಮಾಣಪತ್ರ ಸಲ್ಲಿಸಲು ವಿಫಲವಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದೆ' ಎಂದರು.

