ನವದೆಹಲಿ: ಕಳೆದ ವರ್ಷ ಭಾರತ ನಡೆಸಿದ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆ ವೇಳೆ ಪಾಕಿಸ್ತಾನಕ್ಕೆ ಅದರ ನೆಲದಲ್ಲೇ ತಾಂತ್ರಿಕ ಬೆಂಬಲ ನೀಡಿರುವುದಾಗಿ ಚೀನಾ ಅಧಿಕೃತವಾಗಿ ನೀಡಿರುವ ಹೇಳಿಕೆ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸಬೇಕೆಂದು ಕಾಂಗ್ರೆಸ್, ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಪಾಕಿಸ್ತಾನಕ್ಕೆ ತಾಂತ್ರಿಕ ಬೆಂಬಲ ನೀಡಿರುವ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು 'ಚೀನಾ ಈ ರೀತಿ ನಡೆದುಕೊಂಡರೂ ಚೀನಾ ಮೇಲಿನ ಹೂಡಿಕೆ ಮತ್ತು ವ್ಯಾಪಾರ ನಿರ್ಬಂಧಗಳನ್ನು ಏಕೆ ಸಡಿಲಿಸಲಾಗುತ್ತಿದೆ? ಸರ್ಕಾರವು ಚೀನಾದ ಮೇಲಿನ ಭಾರತದ ಕೈಗಾರಿಕಾ ಅವಲಂಬನೆಯನ್ನು ಏಕೆ ಹೆಚ್ಚಿಸಲು ಪ್ರಯತ್ನಿಸುತ್ತಿದೆ? ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಈ ಕುರಿತು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು 'ಆಪರೇಷನ್ ಸಿಂಧೂರ್ ಸಮಯದಲ್ಲಿ ಚೀನಾ ಸರ್ಕಾರದ ಇಂಥ ಪ್ರತಿಕೂಲ ಕ್ರಮದ ವಿರುದ್ಧ ಮೋದಿ ಸರ್ಕಾರ ಏಕೆ ಮಾತನಾಡುತ್ತಿಲ್ಲ? ಚೀನಾ ಮೇಲಿನ ಹೂಡಿಕೆ ಮತ್ತು ವ್ಯಾಪಾರ ನಿರ್ಬಂಧಗಳನ್ನು ಏಕೆ ಸಡಿಲಿಸಲಾಗುತ್ತಿದೆ ಮತ್ತು ದಾಖಲೆ ಮಟ್ಟದಲ್ಲಿ ಆಮದು ಪ್ರಮಾಣ ಹೆಚ್ಚಿಸುವ ಮೂಲಕ ಚೀನಾದ ಮೇಲಿನ ನಮ್ಮ ಕೈಗಾರಿಕಾ ಅವಲಂಬನೆಯನ್ನು ಸರ್ಕಾರ ಏಕೆ ಹೆಚ್ಚಿಸುತ್ತಿದೆ? ಈ ವಿಷಯಗಳನ್ನು ಸಂಸತ್ತಿನಲ್ಲಿ ಚರ್ಚಿಸಬೇಕು' ಎಂದು ಉಲ್ಲೇಖಿಸಿದ್ದಾರೆ.
ಚೀನಾದ ಚೆಂಗ್ಡು ವಿಮಾನ ವಿನ್ಯಾಸ ಮತ್ತು ಸಂಶೋಧನಾ ಸಂಸ್ಥೆಯ ವಿಮಾನಯಾನ ಉದ್ಯಮ ನಿಗಮದ ಎಂಜಿನಿಯರ್ಗಳು, ಚೀನಾದ ಮುಂದುವರಿದ ಯುದ್ಧ ವಿಮಾನ ಮತ್ತು ಮಾನವರಹಿತ ವೈಮಾನಿಕ ವಾಹನ ವಿನ್ಯಾಸದ ಪ್ರಮುಖ ಅಭಿವೃದ್ಧಿಕಾರರು, ಪಾಕಿಸ್ತಾನಿ ವಾಯುಪಡೆಗೆ ತಾಂತ್ರಿಕ ಬೆಂಬಲವನ್ನು ಒದಗಿಸಿದ್ದಾರೆ ಎಂದು ದೃಢಪಡಿಸಿದ್ದಾರೆ ಎಂದು ರಮೇಶ್ ಹೇಳಿದರು.

