ಚೆನ್ನೈ: ಜ್ಯೋತಿಷಿ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ವಿಶೇಷ ಕರ್ತವ್ಯಾಧಿಕಾರಿಯನ್ನಾಗಿ (ಒಎಸ್ಡಿ) ನೇಮಕ ಮಾಡಿದ್ದಕ್ಕೆ ವಿರೋಧ ಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿದ್ದು, ಸರ್ಕಾರವು ನೇಮಕಾತಿಯನ್ನು ರದ್ದುಪಡಿಸಿದೆ.
ಈ ಸಂಬಂಧ ಸರ್ಕಾರವು ಅಧಿಕೃತ ಆದೇಶ ಹೊರಡಿಸಿದೆ. ವೆಟ್ರಿವೇಲ್ ನೇಮಕಾತಿಯನ್ನು ವಿರೋಧ ಪಕ್ಷಗಳು ಮಾತ್ರವಲ್ಲದೆ, ಟಿವಿಕೆ ಮಿತ್ರಪಕ್ಷಗಳೂ ಪ್ರಶ್ನಿಸಿದ್ದವು.
ರಿಕಿ ರಾಧನ್ ಅವರು ವಿಜಯ್ ಅವರ ಜ್ಯೋತಿಷಿಯಾಗಿದ್ದು, ರಾಜಕೀಯ ವಿಚಾರಗಳಿಗೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡುತ್ತಿದ್ದರು. ಒಎಸ್ಡಿಯಾಗಿ ಜ್ಯೋತಿಷಿಯ ನೇಮಕವು ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗೆ ಗುರಿಯಾಗಿತ್ತು.
ಕಾಂಗ್ರೆಸ್ ಸಂಸದ ಸಸಿಕಾಂತ ಸೆಂಥಿಲ್ ಅವರು ಮಂಗಳವಾರ ವೆಟ್ರಿವೇಲ್ ನೇಮಕಾತಿ ಪತ್ರವನ್ನು ಲಗತ್ತಿಸಿ, ಮುಖ್ಯಮಂತ್ರಿಯ ಸಾಮಾಜಿಕ ಮಾಧ್ಯಮ ಖಾತೆಗೆ ಟ್ಯಾಗ್ ಮಾಡಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದರು.
'ಜ್ಯೋತಿಷಿಗೆ ಒಎಸ್ಡಿ ಸ್ಥಾನ ಏಕೆ ಬೇಕು? ಯಾರಾದರೂ ವಿವರಿಸುತ್ತೀರಾ?' ಎಂದು ಮಾಜಿ ಐಎಎಸ್ ಅಧಿಕಾರಿ ಹಾಗೂ ತಿರುವಳ್ಳೂರು ಕ್ಷೇತ್ರದ ಸಂಸದ ತಮ್ಮ ಖಾತೆಯಲ್ಲಿ ಉಲ್ಲೇಖಿಸಿದ್ದರು.
ಪ್ರಭಾವಿ ರಾಜಕೀಯ ನಾಯಕರ ಜ್ಯೋತಿಷಿ ಎಂದು ಬಿಂಬಿಸಿಕೊಂಡಿದ್ದ ರಿಕಿ ಅವರು ಮಾಜಿ ಮುಖ್ಯಮಂತ್ರಿ, ದಿವಂಗತ ಜಯಲಲಿತಾ ಹಾಗೂ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರಿಗೂ ಆಪ್ತರಾಗಿದ್ದರು ಎನ್ನಲಾಗಿದೆ.
ರಾಧನ್ ಅವರು ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನವೇ ರಾಜ್ಯದಲ್ಲಿ ವಿಜಯ್ ಅವರ ಚುನಾವಣಾ ಯಶಸ್ಸನ್ನು ಭವಿಷ್ಯ ನುಡಿದಿದ್ದರು.

