ಬದಿಯಡ್ಕ: ಭಾರತೀಯ ಸಂಸ್ಕøತಿಯಲ್ಲಿ ವೇದಗಳಿಗೆ ಇರುವ ಮಹತ್ವದಂತೆಯೇ ಸಂಗೀತಕ್ಕೂ ಶ್ರೇಷ್ಠ ಸ್ಥಾನವಿದೆ. ಸಂಗೀತವು ಕೇವಲ ಕಲೆ ಅಲ್ಲ, ಅದು ಭಗವಂತನ ಉಪಾಸನೆಯ ಮಾರ್ಗವೂ ಹೌದು ಎಂದು ಶೃಂಗೇರಿ ಶ್ರೀ ಶಾರದಾಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿ ಆಶೀರ್ವಚನದಲ್ಲಿ ತಿಳಿಸಿದರು.
ಬಳ್ಳಪದವಿನ ನಾರಾಯಣೀಯಂನಲ್ಲಿ ಕಾರ್ಯನಿರ್ವಹಿಸುತ್ತಿರುವ ವೀಣಾವಾದಿನಿ ಸಂಗೀತ ಹಾಗೂ ವೈದಿಕ - ತಾಂತ್ರಿಕ ವಿದ್ಯಾಪೀಠಕ್ಕೆ ಚಿತ್ತೈಸಿದ ಬಳಿಕ ನಡೆದ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಸಂಗೀತ ತ್ರಿಮೂರ್ತಿಗಳು ಹಾಗೂ ವಾಗ್ಗೇಯಕಾರರು ಭಗವಂತನ ಆರಾಧನೆಗಾಗಿ ರಚಿಸಿದ ಕೃತಿಗಳೇ ಭಾರತೀಯ ಸಂಗೀತ ಪರಂಪರೆಯ ಅಮೂಲ್ಯ ಸಂಪತ್ತು ಎಂದು ಹೇಳಿದರು. ಇಂದಿನ ಸಂಗೀತಜ್ಞರು ಹಾಗೂ ವಿದ್ಯಾರ್ಥಿಗಳು ಆ ಪರಂಪರೆಯನ್ನು ಗೌರವಿಸಿ ಮುಂದುವರಿಸಬೇಕೆಂದು ಕರೆ ನೀಡಿದರು.
ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿಯೇ ಸಂಗೀತ ಹಾಗೂ ಶಾಸ್ತ್ರೀಯ ಕಲೆಗಳ ಅಭ್ಯಾಸ ಆರಂಭಿಸಿದರೆ ಅದು ಜೀವನಪೂರ್ತಿ ಉಳಿಯುತ್ತದೆ. ಹೆತ್ತವರು ಮಕ್ಕಳನ್ನು ವೀಣಾವಾದಿನಿಯಂತಹ ಸಂಸ್ಥೆಗಳಿಗೆ ಕಳುಹಿಸಿ ಸಂಗೀತ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಕಲಿಸಬೇಕೆಂದು ಅವರು ತಿಳಿಸಿದರು.
ಈ ವೇಳೆ ವೀಣಾವಾದಿನಿಯ 25 ವರ್ಷಗಳ ಪಯಣ, ಇಲ್ಲಿ ನಡೆಯುತ್ತಿರುವ ಸಂಗೀತಾರಾಧನೆ, ಪೂಜೆ ಜೊತೆಗೆ ನಡೆಯುವ ಸಂಗೀತಾರ್ಚನೆ, ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ರಾಜಾರಾಮ ಪೆರ್ಲ ಅವರು ವಿವರಿಸಿದರು. ಪೂರ್ವದಲ್ಲಿ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಸಹ ವೀಣಾವಾದಿನಿಗೆ ಆಗಮಿಸಿ ಆಶೀರ್ವದಿಸಿದ್ದನ್ನು ಅವರು ಸ್ಮರಿಸಿದರು. ಅದಕ್ಕೂ ಮೊದಲಿನ ಜಗದ್ಗುರುಗಳಾಗಿದ್ದ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು ಕೂಡ ವೀಣಾವಾದಿನಿಯು ಈಗ ನೆಲೆನಿಂತಿರುವ ಬಳ್ಳಪದವಿನ ನೆಲಕ್ಕೆ ಚಿತ್ತೈಸಿದ್ದು ಬಳ್ಳಪದವು ಪರಂಪರೆಯ ಮಹಾಭಾಗ್ಯ ಎಂಬುದೂ ಇಲ್ಲಿ ಗಮನಾರ್ಹವಾದ ವಿಷಯ.
ವೀಣಾವಾದಿನಿಯಲ್ಲಿ ನಡೆಯುತ್ತಿರುವ ಸಂಗೀತ ಅಧ್ಯಾಪನ, ಕಲಿಕೆ ಮತ್ತು ಆರಾಧನಾ ಚಟುವಟಿಕೆಗಳನ್ನು ಜಗದ್ಗುರುಗಳು ಶ್ಲಾಘಿಸಿ, ಸಂಸ್ಥೆಗೆ ತಮ್ಮ ಆಶೀರ್ವಾದ ಹಾಗೂ ಅನುಗ್ರಹ ಸದಾ ಇರುತ್ತದೆ ಎಂದು ಹರಸಿದರು.
ಜಗದ್ಗುರುಗಳನ್ನು ಸಂಸ್ಥೆಯ ವತಿಯಿಂದ ಭಕ್ತಿಪೂರ್ವಕವಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ವಿದ್ವಾನ್. ಯೋಗೀಶ ಶರ್ಮ ಬಳ್ಳಪದವು ಹಾಗೂ ವೀಣಾವಾದಿನಿಯ ವಿದ್ಯಾರ್ಥಿಗಳು ಜಗದ್ಗುರುಗಳ ಸಮ್ಮುಖದಲ್ಲಿ ಸಂಗೀತಾರ್ಚನೆ ಸೇವೆ ಸಲ್ಲಿಸಿದರು. ಮೃದಂಗದಲ್ಲಿ ಪಯ್ಯನ್ನೂರು ಗೋವಿಂದ ಪ್ರಸಾದ್ ಹಾಗೂ ಘಟಂನಲ್ಲಿ ಪರಾಶರ ಉಪ್ಪಂಗಳ ಸಹಕರಿಸಿದರು.

.jpg)
.jpg)
