HEALTH TIPS

ದೇವರ ಆರಾಧನೆಯಿಂದ ಮಾನಸಿಕ ಮತ್ತು ಆಧ್ಯಾತ್ಮಿಕ ಬಲವರ್ಧನೆ: ನೆಲ್ಲಿಕುಂಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಆಶೀರ್ವಚನ ನೀಡಿ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಮಹಾ ಸ್ವಾಮೀಜಿ

ಪೆರ್ಲ: ದೇವರ ಆರಾಧನೆ ಕೇವಲ ಧಾರ್ಮಿಕ ಆಚರಣೆಯಲ್ಲ, ಬದಲಾಗಿ ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿಯ ಮೂಲವಾಗಿದೆ. "ದೇವರ ಆರಾಧನೆ ನಮ್ಮ ಬಲ" ಎಂಬ ನಂಬಿಕೆ ಅತ್ಯಂತ ಶಕ್ತಿಶಾಲಿ ಸೂತ್ರವಾಗಿದೆ. ದೇವಾಲಯಗಳು ನಮ್ಮಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬುವ ಪವಿತ್ರ ಕೇಂದ್ರಗಳು ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಮಹಾ ಸ್ವಾಮೀಜಿ  ಹೇಳಿದರು.


ಪೆರ್ಲ ಸಮೀಪದ ನೆಲ್ಲಿಕುಂಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಮಂಗಳವಾರ ರಾತ್ರಿ ಭೇಟಿ ನೀಡಿದ ಅವರು ದೇವರ ದರ್ಶನ ಪಡೆದು ಫಲ ಪುಷ್ಪ, ಸ್ಮರಣಿಕೆ ಸ್ವೀಕರಿಸಿ ಆಶೀರ್ವಚನ ನೀಡಿದರು.

ರಾಜ, ಮಹಾರಾಜರುಗಳ ಚರಿತ್ರೆಯನ್ನು ಅವಲೋಕನ ಮಾಡಿದರೆ, ಅನೇಕ ದೇವಾಲಯಗಳ ಜೀರ್ಣೋದ್ಧಾರ, ಬ್ರಹ್ಮಕಲಶ ಮಾಡಿಸಿದ್ದನ್ನು ತಿಳಿಯಬಹುದು. ಭಕ್ತಿ ಮತ್ತು ಸೇವಾ ಮಾರ್ಗದಿಂದ ಭಗವಂತನ ಅನುಗ್ರಹವನ್ನು ಪಡೆದು, ಅನೇಕ ಪ್ರಭಾವಶಾಲಿಗಳು, ಮಹಾತ್ಮರು ತಮ್ಮ ಆಂತರಿಕ ಶಕ್ತಿ ಮತ್ತು ಜ್ಞಾನವನ್ನು ವೃದ್ಧಿಸಿಕೊಂಡಿದ್ದಾರೆ. "ಭಗವತ್ ಅನುಗ್ರಹದಿಂದ ಮಾತ್ರ ಸಫಲತೆ" ಎಂಬುದು ಭಾರತೀಯ ಸಂಸ್ಕøತಿ ಮತ್ತು ದರ್ಶನಶಾಸ್ತ್ರದಲ್ಲಿನ ಆಳವಾದ ನಂಬಿಕೆಯಾಗಿದೆ. "ನಾನೇ ಮಾಡಿದ್ದು" ಎಂಬ ಅಹಂಕಾರವನ್ನು ತೊರೆದು, ಎಲ್ಲವೂ ದೇವರ ಇಚ್ಛೆ ಎಂದು ಭಗವಂತನಿಗೆ ಶರಣಾದಾಗ ಸಫಲತೆ ಮತ್ತು ಶಾಂತಿ ದೊರೆಯುವುದು ಎಂದರು.


ಸಾಹಿತಿ, ಚಿಂತಕ, ಶಿಕ್ಷಣ ತಜ್ಞ ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಸ್ವಾಮೀಜಿಗಳನ್ನು ಗೌರವಿಸಿ ಮಾತನಾಡಿ, ನಾವೆಲ್ಲಾ ಶಂಕರಾಚಾರ್ಯ ಪರಂಪರೆಯ ಭಕ್ತರು. ಆದಿ ಶಂಕರಾಚಾರ್ಯರು ಹಿಂದೂ ಧರ್ಮದ ರಕ್ಷಣೆ ಮತ್ತು ಪ್ರಚಾರಕ್ಕಾಗಿ ಭಾರತದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಅದ್ವೈತ ವೇದಾಂತ ಪೀಠಗಳನ್ನು ಸ್ಥಾಪಿಸಿದ್ದಾರೆ. 1,200 ವರ್ಷ ಇತಿಹಾಸದ ಶೃಂಗೇರಿ ಪೀಠವು ಅದ್ವೈತ ವೇದಾಂತ ತತ್ವವನ್ನು ಸಂರಕ್ಷಿಸುವ ಮತ್ತು ಪ್ರಚಾರ ಮಾಡುವ ಪ್ರಮುಖ ಕೇಂದ್ರವಾಗಿದೆ. ಶೃಂಗೇರಿ ಜಗದ್ಗುರುಗಳು ಶಂಕರಾಚಾರ್ಯರ ಪರಂಪರೆಯನ್ನು ಮುನ್ನಡೆಸುತ್ತಿದ್ದಾರೆ. ಶೃಂಗೇರಿ ಶಾರದಾ ಪೀಠವು ಆಧ್ಯಾತ್ಮಿಕತೆಯ ಜೊತೆಗೆ ಪ್ರಬಲ ಸಾಮಾಜಿಕ ಬದ್ಧತೆಯನ್ನು ಹೊಂದಿದೆ. ದೇಶ ಕಾಯುವ ಸೈನಿಕರಿಗೆ ಗುರುಪೀಠವು ಅನೇಕ ಸಂದರ್ಭಗಳಲ್ಲಿ ಸಾಂತ್ವನ ನೀಡಿದೆ. ಸೈನಿಕರು ಗಾಯಗೊಂಡಾಗ ತೀವ್ರ ರಕ್ತಸ್ರಾವವನ್ನು ತಡೆಗಟ್ಟಲು ಮತ್ತು ತ್ವರಿತವಾಗಿ ರಕ್ತ ಹೆಪ್ಪುಗಟ್ಟುವಂತೆ ಮಾಡುವ ತಂತ್ರಜ್ಞಾನದ ಸಂಶೋಧನೆಗೆ ಪೀಠವು 30  ಕೋಟಿ ರೂ. ನೆರವು ನೀಡಿದೆ. ಹಿಂದೂ ದರ್ಮದ ರಕ್ಷಣೆಗಾಗಿ ಕೇರಳದಿಂದ ಕಾಶ್ಮೀರದವರೆಗೆ ಉಪಕ್ರಮಗಳನ್ನು ನೀಡಿದೆ. ಸ್ಪಿರಿಚ್ಯುವಲ್ ಇಂಡಿಯಾ ಪರಿಕಲ್ಪನೆಗೆ ಶೃಂಗೇರಿ ಮಠ ಒತ್ತು ನೀಡಿದೆ ಎಂದರು. ನಿವೃತ್ತ ಶಿಕ್ಷಕ ಡಾ.ಸತೀಶ್ ಪುಣಿಂಚಿತ್ತಾಯ ಸ್ವಾಗತಿಸಿ, ಸುರೇಶ್ ನೆಲ್ಲಿಕುಂಜೆ ನಿರೂಪಿಸಿದರು.

ಪೂರ್ಣಕುಂಭ ಸ್ವಾಗತ:

ಸಿರಿಬಾಗಿಲುವಿನಲ್ಲಿ ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತಿ ಸ್ಮೃತಿ ಮಂದಿರ ಉದ್ಘಾಟಿಸಿದ ಬಳಿಕ ಮಂಗಳವಾರ ರಾತ್ರಿ 9.10ರ ವೇಳೆ ನೆಲ್ಲಿಕುಂಜೆ ಕ್ಷೇತ್ರಕ್ಕೆ ತಲುಪಿದ ಶ್ರೀ ವಿಧುಶೇಖರ ಭಾರತಿ ಮಹಾ ಸ್ವಾಮೀಜಿಗಳಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಸುಮಂಗಲಿಯರು ಆರತಿ ಬೆಳಗಿದರು. ಹಾರ ಹಾಗೂ ಫಲ ಸಮರ್ಪಿಸಲಾಯಿತು. ದೇಗುಲದ ಒಳಗೆ ಪ್ರದಕ್ಷಿಣೆ ಬಂದ ಮೇಲೆ ಅರ್ಚಕರು ದೇವರಿಗೆ ಆರತಿ ಬೆಳಗಿದರು. ಧೂಳೀಪಾದ ಪೂಜೆ,  ಪ್ರಥಮ ವೇದ ಘೋಷ, ಕಾರ್ಯಕ್ರಮ ನಡೆಯಲಿದೆ. ಮಂತ್ರಾಕ್ಷತೆ ಬಳಿಕ ಕ್ಷೇತ್ರದ ವತಿಯಿಂದ ಸ್ವಾಮೀಜಿಗಳನ್ನು ಬೀಳ್ಕೊಡಲಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries