ಕಾಸರಗೋಡು: ಶ್ರೀ ಶಂಕರ ಭಗವತ್ಫಾದವರ ತತ್ವಗಳ ಪಾಲನೆ ಆತ್ಮೋದ್ಧಾರದೊಂದಿಗೆ ಸಕಲ ಸಂಕಷ್ಟಗಳಿಗೆ ಪರಿಹಾರ ಸಾಧ್ಯವಾಗುವುದಾಗಿ ಶೃಂಗೇರಿ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಪಾದಂಗಳವರ ತತ್ಕರಕಮಲ ಸಂಜಾತ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರುತಿಳಿಸಿದ್ದಾರೆ.
ಅವರು ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದಲ್ಲಿ ನೂತನವಾಗಿ ನಿರ್ಮಿಸಿದ ಶಿಲಾಮಯ ಮಂಟಪದಲ್ಲಿ ಜಗದ್ಗುರು ಶ್ರೀ ಶಂಕರ ಭಗವತ್ಪಾದಾಚಾರ್ಯರ ಪಂಚಲೋಹದ ಪ್ರತಿಮೆಯ ಪ್ರತಿಷ್ಠಾಪನೆಯೊಂದಿಗೆ ಕುಂಭಾಭಿಷೇಕ ನೆರವೇರಿಸಿ, ಮಂದಿರ ಲೋಕಾರ್ಪಣೆಗೈದು ಆಶೀರ್ವಚನ ನಿಡಿದರು. ಶ್ರೀಶಂಕರ ಭಗವತ್ಪಾದರ ಪರತತ್ವದ ಉಪದೇಶ, ಮಾತುಗಳಿಗೂ ನಿಲುಕದವುಗಳಾಗಿದ್ದು, ಪರಿಪೂರ್ಣ ತತ್ವದ ಅನುಭವವಾಗಬೇಕಾದರೆ ಭಗವತ್ಪಾದರು ತೋರಿಸಿದ ಮಾರ್ಗದಲ್ಲಿ ಮುನ್ನಡೆಯುವುದು ಅನಿವಾರ್ಯ ಎಂದು ತಿಳಿಸಿದರು.
ಇದೇ ಸಂದರ್ಭ ಶ್ರೀಮಠದ ಆನಂದ ಭಾರತೀ ಪ್ರಕಾಶನದ ಲಾಂಛನವನ್ನು ಶೃಂಗೇರಿ ಜಗದ್ಗುರುಗಳು ಬಿಡುಗಡೆಗೊಳಿಸಿದರು. ಅಪೂರ್ವ ಭತ್ತದ ತಳಿಗಳ ಸಂಗ್ರಹ ಹಾಗೂ ಸಂಶೋಧನೆಗಾಗಿ ಪದ್ಮಭೂಷಣ ಪಡೆದ ಸತ್ಯನಾರಾಯಣ ಬೆಳೇರಿ ಅವರ ಮುಂದಿನ ಸಂಶೋಧನೆಗೆ ನೆರವಾಗುವ ನಿಟ್ಟಿನಲ್ಲಿ ಸ್ಥಾಪಿಸಲ್ಪಟ್ಟ ಬೆಳ್ಳೂರು ನೆಟ್ಟಣಿಗೆಯ ಅತಿಕಾರ ಟ್ರಸ್ಟ್ನ ಲಾಂಛನ ಬಿಡುಗಡೆಗೊಳಿಸಿ, ಸತ್ಯನಾರಾಯಣ ಬೆಳೇರಿ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡ ಗೌರವಿಸಿದರು. ಪ್ರತಿಮೆ ಸ್ಥಾಪನೆಗೆ ಕೊಡುಗೆಮನೀಡಿದ ರಾಜೀವ ಅಗಸ್ತ್ಯ ಅವರನ್ನು ಗೌರವಿಸಲಾಯಿತು.
ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಶ್ರೀಶಂಕರ ಭಗವತ್ಪಾದರ ಪ್ರತಿಮೆ ಸ್ಥಾಪನೆಯ, ಬ್ರಹ್ಮೈಕ್ಯ ಶ್ರೀಕೇಶವಾನಂದ ಭಾರತೀ ತೀರ್ಥ ಸ್ವಾಮೀಜಿ ಅವರ ಇಚ್ಛೆ ಇಂದು ನೆರವೇರಿದೆ. ಶ್ರೀ ಶಂಕರ ಭಗವತ್ಪಾದರು ಶತಮಾನಗಳ ಹಿಂದೆ ಬೋಧಿಸಿದ ತತ್ವಗಳು ಇಂದಿಗೂ ಪ್ರಸಕ್ತವಾಗಿದ್ದು, ಶ್ರೀ ಶಂಕರಾಚಾರ್ಯದ ತತ್ವಗಳಿಂದ ಹಿಂದೂ ಸಮಾಜಕ್ಕೆ ಭದ್ರ ನೆಲೆ ಲಭಿಸುವಂತಾಗಿದೆ ಎಂದು ತಿಳಿಸಿದರು.
ಸಂಸದ ರಾಜ್ಮೋಹನ್ ಉಣ್ಣಿತ್ತಾನ್, ಉದುಮ ಶಾಸಕ ಕೆ. ನೀಲಕಂಠನ್, ಶೃಂಗೇರಿ ಮಠದ ವಿಧ್ವಾಂಸರು, ಪುರೋಹಿತರು, ಶ್ರೀಮಠದ ಉಪಶಾಖೆಗಳ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು. ಶ್ರೀಮಠದ ಪುರೋಹಿತರಿಂದ ವೈದಿಕ ಪ್ರಾರ್ಥನೆ, ಬಳ್ಳಪದವು ಯೋಗೀಶ್ ಶರ್ಮ ಅವರಿಂದ ಸಂಗೀತ ಪ್ರಾರ್ಥನೆ ನಡೆಯಿತು. ಹಿರಣ್ಯ ವೆಂಕಟೇಶ್ವರ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಕಾರ್ಯಕ್ರಮ ನಿರೂಪಿಸಿದರು. ಡಾ. ಟಿ. ಶ್ಯಾಮ್ ಭಟ್ ಸ್ವಾಗತಿಸಿದರು. ಶ್ರೀಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ಶೃಂಗೇರಿ ಜಗದ್ಗುರುಗಳಿಗೆ ಫಲಪುಷ್ಪ ಸಮರ್ಪಿಸಿದರು. ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಪುತ್ತೂರು ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಶ್ರೀ ರುದ್ರಹವನ, ದಕ್ಷಿಣಾಮೂರ್ತಿ ಹವನ, ಶ್ರೀ ಗೋಪಾಲಕೃಷ್ಣ ಹವನ ನಡೆಯಿತು.



