ಆಮ್ಸ್ಟರ್ಡ್ಯಾಮ್: ಭಾರತವು ಸಾಕಷ್ಟು ಬದಲಾವಣೆಗಳಿಗೆ ತೆರೆದುಕೊಳ್ಳುತ್ತಿದೆ. ಅದರ ಆಕಾಂಕ್ಷೆಗಳಿಗೆ ಮಿತಿ ಎಂಬುದೇ ಇಲ್ಲ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಭಾರತವನ್ನು 'ಅವಕಾಶಗಳ ನಾಡು' ಎಂದು ಕರೆದಿದ್ದಾರೆ.
ನೆದರ್ಲೆಂಡ್ಸ್ನ ಹೇಗ್ನಲ್ಲಿ ಭಾರತೀಯ ಸಮುದಾಯದವರನ್ನುದ್ದೇಶಿಸಿ ಶನಿವಾರ ಮಾತನಾಡಿರುವ ಮೋದಿ, ಭಾರತವು ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಿದೆ. ಯುವಕರು ಆಕಾಶಕ್ಕೇರಲು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.
40 ನಿಮಿಷ ಮಾತನಾಡಿದ ಅವರು, 'ಇಂದಿನ ಭಾರತವು ನಮಗೆ ಕೇವಲ ಬದಲಾವಣೆಯಷ್ಟೇ ಅಲ್ಲ, ಅತ್ಯುತ್ತಮವಾದದ್ದು ಬೇಕು. ಎಲ್ಲವೂ ವೇಗವಾಗಿ ಆಗಬೇಕು ಎಂದು ಬಯಸುತ್ತಿದೆ. ದೇಶದಲ್ಲಿ ಅಪರಿಮಿತವಾದ ನಿರೀಕ್ಷೆಗಳು ಇರುವಾಗ, ಅದಕ್ಕೆ ತಕ್ಕಂತೆಯೇ ಪ್ರಯತ್ನಗಳೂ ನಡೆಯುತ್ತಿವೆ' ಎಂದು ತಿಳಿಸಿದ್ದಾರೆ.
ಭಾರತವು ಅಭೂತಪೂರ್ವ ಬದಲಾವಣೆಗಳಿಗೆ ತೆರೆದುಕೊಂಡಿದೆ ಎಂದಿರುವ ಮೋದಿ, ಭಾರತವು ಇತ್ತೀಚೆಗೆ ಅತ್ಯಂತ ಯಶಸ್ವಿಯಾಗಿ ಎಐ ಶೃಂಗಸಭೆ ಆಯೋಜಿಸಿದ್ದನ್ನು ನೀವೆಲ್ಲ ನೋಡಿರಬಹುದು. ಅದಕ್ಕೂ ಮೊದಲು ನಡೆದ ಜಿ20 ಸಮಾವೇಶವೂ ಯಶಸ್ವಿಯಾಗಿತ್ತು. ಇದು ಒಂದು ಸಲ ಆಯೋಜಿಸಿದ ಕಾರ್ಯಕ್ರಮ ಮಾತ್ರವಲ್ಲ. ಭಾರತದ ದೃಷ್ಟಿಕೋನವೇ ಆ ರೀತಿಯದ್ದಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ನವೋದ್ಯಮ ಬೆಳವಣಿಗೆ ಕುರಿತೂ ಮಾತನಾಡಿರುವ ಪ್ರಧಾನಿ, ಭಾರತವು ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಜಾಲವನ್ನು ಹೊಂದಿದೆ ಎಂದು ಹೇಳಿದ್ದಾರೆ.
'ಭಾರತದ ಆಕಾಂಕ್ಷೆಗಳು ಇನ್ನುಮುಂದೆ ಗಡಿಗೆ ಸೀಮಿತವಾಗುವುದಿಲ್ಲ. ಒಲಿಂಪಿಕ್ಸ್ ಅನ್ನು ಆಯೋಜಿಸಲು, ಜಾಗತಿಕ ಉತ್ಪಾದನಾ ಕೇಂದ್ರವಾಗಲು, ನೈಸರ್ಗಿಕ ಇಂಧನ ಉತ್ಪಾದನೆಯಲ್ಲಿ ಅಗ್ರಸ್ಥಾನಕ್ಕೇರಲು, ವಿಶ್ವದ ಅಭಿವೃದ್ಧಿಯ ಎಂಜಿನ್ ಆಗಲು ಬಯಸುತ್ತಿದೆ' ಎಂದು ಹೇಳಿದ್ದಾರೆ.

