ಇಂದಿರಾ ಗಾಂಧಿ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದೊಂದಿಗೆ ಸಂಯೋಜಿತವಾಗಿರುವ ಸಂಶೋಧಕರು ನಡೆಸಿದ ಕ್ಷೇತ್ರ ಸಮೀಕ್ಷೆಯ ವೇಳೆ ಫರೀದಾಬಾದ್ ಜಿಲ್ಲೆಯ ಕೋಟ್ ಗ್ರಾಮದಲ್ಲಿ ಕಾಡುಬೆಕ್ಕು (rusty-spotted cat) ಅಥವಾ ಪ್ರಿಯೊನೈಲುರಸ್ ರುಬಿಜಿನೋಸಸ್ ಪತ್ತೆಯಾಗಿದೆ. ಅಮಿತ್ ಕುಮಾರ್, ತೇಜ್ವೀರ್ ಮಾವಿ, ಯತಿನ್ ವರ್ಮಾ, ರಾಮ್ ಕುಮಾರ್ ರಾವತ್ ಮತ್ತು ಸೊಹೈಲ್ ಮದನ್ ದಾಖಲಿಸಿರುವ ಈ ಸಂಶೋಧನೆ ಮಹತ್ವದ್ದಾಗಿದೆ. ಏಕೆಂದರೆ, ಇದು ಸಂತಾನೋತ್ಪತ್ತಿಯ ಪುರಾವೆಗಳನ್ನು ಒದಗಿಸುತ್ತದೆ. ಫರೀದಾಬಾದ್ ನಿಂದ ಗುರುಗಾಂವ್ ನಡುವಿನ ಅರಾವಳಿ ಪರಿಸರದಲ್ಲಿ ಈ ಕಾಡುಬೆಕ್ಕಿನ ಸಂತತಿ ನೆಲೆಸಿರುವ ಸಾಧ್ಯತೆಯಿದೆ.
ವಿಶ್ವದ ಅತ್ಯಂತ ಚಿಕ್ಕ ಕಾಡುಬೆಕ್ಕು ಪ್ರಭೇದಗಳಲ್ಲಿ ಒಂದಾದ ಈ ಕಾಡುಬೆಕ್ಕನ್ನು ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣೆ ಒಕ್ಕೂಟವು ಅಪಾಯದ ಅಂಚಿನಲ್ಲಿರುವ ಕೆಂಪು ಪಟ್ಟಿಯಲ್ಲಿ ಸೇರಿಸಿದೆ. ಭಾರತ, ನೇಪಾಳ ಮತ್ತು ಶ್ರೀಲಂಕಾದಲ್ಲಿ ಈ ಕಾಡುಬೆಕ್ಕುಗಳು ಕಂಡುಬರುತ್ತವೆ.
ವಾಸ್ತವದಲ್ಲಿ, ಅಪಾಯದ ಅಂಚಿನಲ್ಲಿರುವ ಈ ಬೆಕ್ಕು ಕಂಡುಬಂದಿರುವುದು ಉತ್ಸಾಹ ಮತ್ತು ಕಳವಳ ಎರಡಕ್ಕೂ ಕಾರಣವಾಗಿದೆ. "ಅರಾವಳಿಗಳು ಹರಿಯಾಣ, ದಿಲ್ಲಿ, ರಾಜಸ್ಥಾನ ಮತ್ತು ಗುಜರಾತ್ನಾದ್ಯಂತ ಹರಡಿರುವ ಭೂರಚನೆಗಳಾಗಿವೆ. ಅವು ಗಾಳಿತಡೆಗಳು, ಅಂತರ್ಜಲ ಜಲಾನಯನ ಪ್ರದೇಶಗಳು ಮತ್ತು ವನ್ಯಜೀವಿ ಆವಾಸಸ್ಥಾನಗಳಾಗಿವೆ. ಅರಾವಳಿಗಳನ್ನು ಎತ್ತರದಿಂದ ಮಾತ್ರ ಅಳೆದು ನಾಶಪಡಿಸುವುದು ಅದರ ಮೂಲಭೂತ ಪರಿಸರ ಪಾತ್ರವನ್ನು ಕಡೆಗಣಿಸುವುದಾಗಿದೆ" ಎಂದು ಸಂರಕ್ಷಣವಾದಿ ಹಾಗೂ ಡೆಕ್ಕನ್ ಸಂರಕ್ಷಣಾ ಪ್ರತಿಷ್ಠಾನದ ಸಂಸ್ಥಾಪಕ ಇಂದ್ರಜಿತ್ ಘೋರ್ಪಡೆ ಅಭಿಪ್ರಾಯಪಟ್ಟಿದ್ದಾರೆ.
ಈ ಅರಾವಳಿ ಪ್ರದೇಶದಲ್ಲಿ ಗಣಿಗಾರಿಕೆ, ಅವೈಜ್ಞಾನಿಕ ನಗರೀಕರಣ ಮತ್ತು ಅನಿಯಂತ್ರಿತ ಕೈಗಾರಿಕಾ ಹಾಗೂ ವಾಣಿಜ್ಯ ಅಭಿವೃದ್ಧಿಯಿಂದ ನಿರಂತರ ಪರಿಸರ ನಾಶವಾಗಿದೆ. ವನ್ಯಜೀವಿಗಳ ಕಾರಿಡಾರ್ಗಳು ಮುರಿದು ಹೋಗಿವೆ. ವನ್ಯಜೀವಿಗಳು ಸುಸ್ಥಿರವಲ್ಲದ ಪ್ರದೇಶಗಳಲ್ಲಿ ಬದುಕುವಂತಾಗಿದೆ. ಕಾಡುಬೆಕ್ಕಿನಂತಹ ವನ್ಯಜೀವಿಗಳ ಸಂತಾನೋತ್ಪತ್ತಿ ವಲಯಗಳು ಮತ್ತು ಬೇಟೆಯ ಜಾತಿಗಳನ್ನು ಅರಾವಳಿ ಕಳೆದುಕೊಳ್ಳುತ್ತಿದೆ. ಈ ಜೀವರೂಪಗಳನ್ನು ಬೆಂಬಲಿಸುವ ಸ್ಥಳೀಯ ಸಸ್ಯವರ್ಗವೂ ಕಣ್ಮರೆಯಾಗುತ್ತಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾನವ ವಸತಿ ಪ್ರದೇಶದಲ್ಲಿ ಕಾಡುಬೆಕ್ಕು ಕಂಡುಬಂದಿರುವುದು ಅಭಿವೃದ್ಧಿಯ ಪ್ರತೀಕವಾಗದೆ, ಕುಗ್ಗುತ್ತಿರುವ ಅರಣ್ಯ ಪ್ರದೇಶಗಳ ಪ್ರತಿಬಿಂಬವಾಗಿದೆ ಎಂದು ಅವರು ಹೇಳಿದ್ದಾರೆ.

